ಬೆಂಗಳೂರು: ‘ಕೋವಿಡ್ ಲಸಿಕೆಗಳ ಪರಿಣಾಮದ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ್ದಕ್ಕೆ ಇಂದು ಪುರಾವೆ ಸಿಕ್ಕಿದೆಯಲ್ಲ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ದೃಢಪಟ್ಟ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದೆ. ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ, ಲಸಿಕೆ ಪಡೆದಿದ್ದ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ ಮತ್ತು ಏಕೆ ಎಂದು ಪ್ರಶ್ನಿಸಿದೆ.
ಕೋವಿಡ್ಗೆ ಲಸಿಕೆ ಮದ್ದಲ್ಲ ಎಂಬುದನ್ನು ಅರ್ಥಕೊಳ್ಳಿ. ಅದು ರೋಗ ನಿರೋಧಕ ಶಕ್ತಿ ವೃದ್ಧಿಸಿ ಸೋಂಕು ಕಡಿಮೆ ಮಾಡಬಹುದು ಎಂದು ಹೇಳಿದೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಯಾವಾಗಾ? ಆರಂಭದಿಂದಲೇ ಲಸಿಕೆಯ ಪರಿಣಾಮದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾ ಬಂದಿದ್ದು, ಈಗ ಲಸಿಕೆ ಕೊರತೆ ಇದೆ ಎಂದು ಹೇಳಿದೆ.
ಸುಳ್ಳನ್ನೇ ವೈಭವೀಕರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಜೊತೆ ನಿಂತು ದೇಶದ ಜನರಲ್ಲಿ ಭರವಸೆ ಮೂಡಿಸುವುದು ಬಿಟ್ಟು, ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದೆ ಎಂದು ಕಿಡಿ ಕಾರಿದೆ.
ಭಾರತೀಯ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಾಗ, ಲಸಿಕಾ ಅಭಿಯಾನ ನಡೆದಾಗ ಕಾಂಗ್ರೆಸ್ ಪಕ್ಷದ ಮುಖಂಡರು ಇದು ಬಿಜೆಪಿ ಲಸಿಕೆ ಎಂದು ಟೀಕಿಸಿದ್ದರು. ಈಗ ದೇಶದ ಎಲ್ಲ ಜನರಿಗೂ ಲಸಿಕೆ ಕೊಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ನಿಲುವುಗಳಲ್ಲಿ ಇಷ್ಟೊಂದು ವ್ಯತ್ಯಾಸ ಏಕೆ? ದೇಶದ ಪರವಾಗಿ ಕಾಂಗ್ರೆಸ್ ನಿಲ್ಲುವುದು ಯಾವಾಗ ಎಂದು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.