ಧಾರವಾಡ: ರಾಷ್ಟ್ರದಾದ್ಯಂತ ಕಲ್ಲಿದ್ದಲ್ಲು ಗಣಿಗಾರಿಕೆಯನ್ನು ಖಾಸಗೀಕರಣಕ್ಕೆ ಅವಕಾಶ ಒದಗಿಸಿಕೊಟ್ಟಿರುವ ಕೇಂದ್ರ ಸರ್ಕಾರದ ನಿರ್ಣಯ ಹಾಗೂಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೇ 22ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜನಸಂಗ್ರಾಮ ಪರಿಷತ್ತಿನ ಎಸ್.ಆರ್.ಹಿರೇಮಠ ಹೇಳಿದರು.
‘ಸರ್ಕಾರದ ಈ ನಿರ್ಣಯದಿಂದಾಗಿ ಬಳ್ಳಾರಿಯಲ್ಲಿ ಈ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿ ಹಗಲುದರೋಡೆ ಮಾಡಿದಂತ ಸನ್ನಿವೇಶ ಮತ್ತೆ ಸೃಷ್ಟಿಯಾಗಲಿದೆ. ಜತೆಗೆ ಪರಿಸರದ ಮೇಲೆ ದುಷ್ಪರಿಣಾಮ ಉಮಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಿಎಫ್ಡಿ ಜನಾಂದೋಲನಗಳ ಮಹಾಮೈತ್ರಿ ಹಾಗೂ ಜನಸಂಗ್ರಾಮ ಪರಿಷತ್ ಸಮಾನ ನೆಟ್ವರ್ಕ್ ಸಂಘಟನೆಗಳ ವತಿಯಿಂದ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
‘ಅಕ್ರಮ ಗಣಿಗಾರಿಕೆ ನಡೆಸಿದ ಗಾಲಿ ಜನಾರ್ಧನ ರೆಡ್ಡಿ ಹಾಗೂ ಅಂದಿನ ಮುಖ್ಯಮಂತ್ರಿ ಜೈಲಿಗೆ ಹೋಗಿದ್ದು ಇನ್ನೂ ಹಸಿಯಾಗಿಯೇ ಇದೆ. ಅಲ್ಲದೆ ಗೋವಾ, ಒಡಿಶಾ ಇತರ ರಾಜ್ಯಗಳಲ್ಲೂ ಇಂಥ ಅಕ್ರಮಗಳು ನಡೆದಿವೆ. ಇವುಗಳಿಂದ ನಾವು ಇನ್ನೂ ಪಾಠ ಕಲಿತಿಲ್ಲ. ಹೀಗಾಗಿ ಇಂಥ ನಿರ್ಣಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜನಾಂದೋಲನ ಮೂಡಿಸುವುದು ನಮ್ಮ ಮುಂದಿನ ನಡೆಯಾಗಿದೆ’ ಎಂದರು.
‘ಇದರೊಂದಿಗೆ ಕಾರ್ಮಿಕ ಹಕ್ಕುಗಳು ಮತ್ತು ವಲಸೆ ಕಾರ್ಮಿಕರ ವಿರುದ್ಧ ಕೇಂದ್ರ ಸರ್ಕಾರ ಇತ್ತೀಚೆಗೆ ಅವರ ಹಕ್ಕುಗಳ ವಿರುದ್ಧ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಖಂಡಿನೀಯ. ಕಾರ್ಮಿಕರ ಹಕ್ಕುಗಳು ಕ್ಷೀಣಿಸುವ ನಿರ್ಣಯಗಳನ್ನು ಹಿಂಪಡೆದು ಮೊದಲಿನಂತೆ ಇರುಲು ಸಿಎಫ್ಡಿ ಜನಾಂದೋಲನಗಳ ಮಹಾಮೈತ್ರಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸುತ್ತವೆ’ ಎಂದು ಹಿರೇಮಠ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.