ಬೆಂಗಳೂರು: ‘ಸಚಿವ ಕೆ.ಎಸ್. ಈಶ್ವರಪ್ಪ ಪರ ನಾನೇನೂ ವಕೀಲಿಕೆ ಮಾಡುತ್ತಿಲ್ಲ. ಅವರು ಸಹಜವಾಗಿ ನೀಡಿದ್ದ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ ಎಂದಷ್ಟೇ ಹೇಳಿದ್ದೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಈಶ್ವರಪ್ಪ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಹಜವಾಗಿ ಉತ್ತರ ನೀಡಿದ್ದರು. ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಆಗುವಂತಹ ಮಾತಿಲ್ಲ. ಇರುವ ವಿಷಯವನ್ನು ಹಾಗೆಯೇ ನಾನು ಹೇಳಿದ್ದೇನೆ’ ಎಂದರು.
ರಾಷ್ಟ್ರಧ್ವಜದ ಗೌರವದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸಬಾಧ್ಯಕ್ಷರ ಪೀಠದ ಎದುರು ರಾಷ್ಟ್ರಧ್ವಜ ಹಾರಿಸುತ್ತಾ ಪ್ರತಿಭಟನೆ ನಡೆಸಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೆ? ಸದನದಲ್ಲಿ ಸುಮ್ಮನೆ ಕಲಾಪ ವ್ಯರ್ಥ ಮಾಡುವ ಬದಲು ಹೈಕೋರ್ಟ್ನಲ್ಲಿ ಸಾರ್ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಹೋರಾಟ ಮಾಡಲಿ ಎಂದು ಹೇಳಿದರು.
‘ಮಂತ್ರಿಯ ರಾಜೀನಾಮೆ ಪಡೆಯಬೇಕು ಎಂಬ ಪ್ರತಿಷ್ಠೆಗೆ ಬಿದ್ದಿರುವ ಕಾಂಗ್ರೆಸ್ ಪಕ್ಷದವರು ಸದನದ ಕಲಾಪ ನಡೆಯದಂತೆ ಅಡ್ಡಿಪಡಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ‘ರಾಜಕೀಯ ಕೋವಿಡ್’ ಹರಡುವ ಸಂಚು. ಎರಡು ದಿನಗಳ ಕಾಲ ಕಲಾಪ ಹಾಳುಮಾಡಿದ ಕಾಂಗ್ರೆಸ್ ನಡೆಯನ್ನು ಒಪ್ಪಲು ಸಾಧ್ಯವೆ? ಜನರು ಇವರನ್ನು ಕ್ಷಮಿಸುವುದಿಲ್ಲ’ ಎಂದರು.
ಈಶ್ವರಪ್ಪ ಹೇಳಿಕೆಗಿಂತಲೂ ಗಂಭೀರವಾದ ವಿಚಾರಗಳು ಇದ್ದವು. ಆ ಬಗ್ಗೆ ಚರ್ಚೆ ಆಗಬೇಕಿತ್ತು. ಹಿಜಾಬ್ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಅಂತ್ಯ ಹಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚೆಗೆ ಅವಕಾಶ ಸಿಕ್ಕಿಲ್ಲ: ‘ಹತ್ತು ವರ್ಷಗಳ ಅವಧಿಯಲ್ಲಿ ನಡೆದಿರುವ ಹಗರಣಗಳ ಕುರಿತು ಚರ್ಚಿಸಲು ಸಿದ್ಧನಾಗಿದ್ದೆ. ದಾಖಲೆಗಳನ್ನೂ ಸಿದ್ಧಪಡಿಸಿ ಇಟ್ಟುಕೊಂಡಿದ್ದೆ. ಆದರೆ, ಚರ್ಚೆಗೆ ಸಮಯವೇ ಸಿಕ್ಕಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.