ADVERTISEMENT

ಯುವತಿಗೆ ₹ 5 ಕೋಟಿ, ವಿದೇಶದಲ್ಲಿ ಫ್ಲ್ಯಾಟ್ ಆಮಿಷ: ಗದ್ಗದಿತ ಜಾರಕಿಹೊಳಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 9:02 IST
Last Updated 9 ಮಾರ್ಚ್ 2021, 9:02 IST
ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ    

ಬೆಂಗಳೂರು: ಇದು ಶೇ. 100ರಷ್ಟು ನಕಲಿ ಸಿಡಿ. ನಾನು ಅಪರಾಧಿಯಲ್ಲ, ನಿರಪರಾಧಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿದ್ದಾರೆ.

ರಮೇಶ್ ಜಾರಕಿಹೊಳಿಯವರು ಮಹಿಳೆಯನ್ನು ಕೆಲಸದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಿ.ಡಿ ಜೊತೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಇತ್ತೀಚೆಗೆ ಕೇಸ್ ವಾಪಸ್ ಪಡೆದಿದ್ದರು.

ಇದರ ಬೆನ್ನಲ್ಲೇ, ಸುದ್ದಿಗೋಷ್ಠಿ ನಡೆಸಿರುವ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ದಯವಿಟ್ಟು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಸಿ.ಡಿಗೆ ₹ 20 ಕೋಟಿ ಖರ್ಚು ಮಾಡಲಾಗಿದೆ. ಯಶವಂತಪುರ ಮತ್ತು ಹುಳಿಮಾವು ಎರಡು ಕಡೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ADVERTISEMENT

‘ಯುವತಿಗೆ ₹ 50 ಲಕ್ಷವಲ್ಲ. ₹ 5 ಕೋಟಿ ನೀಡಿದ್ದಾರೆ. ವಿದೇಶದಲ್ಲಿ ಎರಡು ಫ್ಲ್ಯಾಟ್‌‌ ಕೊಡಿಸಿರುವಮಾಹಿತಿ ಇದೆ, ಸಿ.ಡಿ ಮಾಡಲು ನೂರಾರು ಕೋಟಿ ಖರ್ಚು ಆಗಿದೆ’ ಎಂದು ಅವರು ಹೇಳಿದ್ದಾರೆ.

ಓರಾಯನ್ ಮಾಲ್‌ಬಳಿಯ 4, 5 ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಷಡ್ಯಂತ್ರ ನಡೆದಿದೆ. ರಾಜಕೀಯ ಏಳಿಗೆ ಸಹಿಸದೆ ಈ ಸಂಚು ನಡೆಸಲಾಗಿದೆ.ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದ್ದಾರೆ.

‘ನಾನು ಅಪರಾಧಿ ಅಲ್ಲ. ನಿರಪರಾಧಿ. ಈ ಸಿ.ಡಿ ಬಗ್ಗೆ 4 ತಿಂಗಳ ಹಿಂದೆಯೇ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ. ಎಷ್ಟೇ ಪ್ರಭಾವಿಗಳಾದರೂ ನಾನು ಬಿಡಲ್ಲ’ ಎಂದರು.

‘ನನಗೆ ಕುಟುಂಬದ ಗೌರವ ಮುಖ್ಯ. ರಾಜಕಾರಣಿಯಾಗಿ ಇರಲು ಆಸಕ್ತಿ ಇಲ್ಲ. ರಾಜಮನೆತನ ನನ್ನದು. ನನ್ನ ಕುಟುಂಬದ ಗೌರವ ವಾಪಸು ಬರಬೇಕು. ರಾಜಕಾರಣಕ್ಕೆ ಮತ್ತೆ ಬರುತ್ತೇನೊ, ಬಡುತ್ತೇನೊ ಗೊತ್ತಿಲ್ಲ. ಆದರೆ, ಈ ರೀತಿ ಮಾಡಿದವರನ್ನು ಜೈಲಿಗೆ ಹಾಕಿಸದೆ ಬಿಡಲ್ಲ’ ಎಂದು ರಮೇಶ್‌ ಜಾರಕಿಹೊಳಿ ಗುಡುಗಿದ್ದಾರೆ.

‘ಮಹಾನ್ ನಾಯಕ’ನಮೇಲೆ ಅನುಮಾನ: ರಾಜಕೀಯ ನಾಯಕರ ಮೇಲೆ ರಮೇಶ್ ಜಾರಕಿಹೊಳಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ನಾನು 3 ತಿಂಗಳು ಇಲಾಖೆ ನಿರ್ವಹಿಸಲಾಗುವುದಿಲ್ಲ ಎಂದು ಆ ಮಹಾನ್ ನಾಯಕ ಚಾಲೆಂಜ್ ಮಾಡಿದ್ದ. ಆತನೇ ಷಡ್ಯಂತ್ರ ನಡೆಸಿರುವ ಸಾಧ್ಯತೆ ಇದೆ. ಆದರೆ, ಆತನ ಹೆಸರು ಹೇಳಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

‘ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ. ಏನೇನು ಆಗುತ್ತೆ ಎಂದು ಸುಮ್ಮನಿದ್ದೆ. 26 ಗಂಟೆ ಮೊದಲು ನನಗೆ ಹೈಕಮಾಂಡ್‌ನಿಂಡ ಸಿ.ಡಿ ಬಿಡುಗಡೆ ಬಗ್ಗೆ ಮಾಹಿತಿ ಸಿಕ್ಕಿತ್ತು. ನೀನು ಧೈರ್ಯದಲ್ಲಿ ಇರು ಎಂದೂ ಹೇಳಿದ್ದರು. ಆರೋಪವನ್ನು ಧೈರ್ಯವಾಗಿ ಎದುರಿಸುತ್ತೇನೆಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಧೈರ್ಯ ತುಂಬಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.