ADVERTISEMENT

ಚಿಕ್ಕೋಡಿಯಿಂದ ಸ್ಪರ್ಧೆಗೆ ಟಿಕೆಟ್ ಕೇಳಿದ್ದೇನೆ: ಪ್ರಭಾಕರ ಕೋರೆ ಹೇಳಿಕೆ

ರಾಜ್ಯಸಭಾ ಸದಸ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 17:05 IST
Last Updated 3 ಫೆಬ್ರುವರಿ 2019, 17:05 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧಿಸಲು ಬಯಸಿದ್ದು, ಟಿಕೆಟ್‌ ನೀಡುವಂತೆ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ’ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿಯ ಪ್ರಭಾಕರ ಕೋರೆ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಪಕ್ಷದಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಚಾರದ ತಂತ್ರಗಳನ್ನು ರೂಪಿಸಲಾಗುತ್ತಿದೆ. ಟಿಕೆಟ್‌ ಸಿಕ್ಕರೆ ಗೆಲ್ಲುವ ವಿಶ್ವಾಸ ನನಗಿದೆ’ ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಸುರೇಶ ಅಂಗಡಿ ಅವರನ್ನೇ ಕಣಕ್ಕಿಳಿಸುವ ಭರವಸೆ ಇದೆ. ಅವರು ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆ ಎಂದಿಗೂ ಜಾತಿ ಹಾಗೂ ಇನ್ನಿತರ ಸ್ಥಳೀಯ ವಿಚಾರಗಳ ಮೇಲೆ ನಡೆಯುವುದಿಲ್ಲ. ರಾಷ್ಟ್ರೀಯ ಸಮಸ್ಯೆಗಳು ಮತ್ತು ಉನ್ನತ ವಿಚಾರಗಳ ಮೇಲೆ ನಡೆಯುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಕೇಂದ್ರದ ಬಜೆಟ್‌ ಐತಿಹಾಸಿಕವಾಗಿದ್ದು, ಎಲ್ಲ ವರ್ಗಗಳಿಗೂ ಅನುಕೂಲವಾಗುವಂಥದ್ದಾಗಿದೆ. ಚುನಾವಣೆಗೂ ಮುನ್ನ ಮಂಡಿಸುವ ಬಜೆಟ್‌ ಯಾವಾಗಲೂ ರಾಜಕೀಯ ಉದ್ದೇಶವನ್ನೇ ಒಳಗೊಂಡಿರುತ್ತದೆ. ಅದರಲ್ಲಿ ಮುಚ್ಚು–ಮರೆ ಏನಿಲ್ಲ. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ವಿಚಾರ ಮಾಡಿ ಮಾತನಾಡಬೇಕು’ ಎಂದು ಬಜೆಟ್‌ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

‘ಪತಿ–ಪತ್ನಿ ಮಧ್ಯೆ ಸಮನ್ವಯದ ಕೊರತೆ ಉಂಟಾದರೆ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಅದೇ ರೀತಿ ಸಮ್ಮಿಶ್ರ ಸರ್ಕಾರದಲ್ಲಿ ದಿನೇ–ದಿನೇ ಬಿರುಕು ಉಂಟಾಗುತ್ತಿದ್ದು, ಶೀಘ್ರವೇ ಪತನವಾಗುವ ಎಲ್ಲ ಲಕ್ಷಣಗಳಿವೆ. ಯಾವುದೇ ಪಕ್ಷವಿರಲಿ ಸರ್ಕಾರ ರಚನೆಯಲ್ಲಿ ಜಿಲ್ಲೆಯ ಶಾಸಕರು ಮಹತ್ವದ ಪಾತ್ರ ವಹಿಸುತ್ತಾರೆ. ಅನೇಕ ಸರ್ಕಾರಗಳು ಪತನವಾಗಲು ಹಾಗೂ ರಚನೆಯಾಗಲು ಜಿಲ್ಲೆಯ ಶಾಸಕರು ಕಾರಣೀಭೂತರಾಗಿದ್ದಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.