ADVERTISEMENT

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 16:38 IST
Last Updated 16 ಆಗಸ್ಟ್ 2023, 16:38 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್‌ಗೆ ಹೋಗುವುದರ ಬದಲು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ’ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.

‘ಬಿಜೆಪಿಗೆ ಈ ಹಿಂದೆ ಕಾಂಗ್ರೆಸ್‌ನಿಂದ ಬಂದವರಲ್ಲಿ ಯಾರು ಮರಳಿ ಹೋಗುತ್ತಾರೋ ಗೊತ್ತಿಲ್ಲ. ನಾನಂತೂ ಹೋಗಲ್ಲ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಕಾಂಗ್ರೆಸ್‌ ಹೋಗುವ ಅವಶ್ಯ ನನಗೆ ಇಲ್ಲ. ಅಧಿಕಾರಕ್ಕಾಗಿ ನಾನು ಪಕ್ಷ ಬಿಟ್ಟು ಹೋಗಲ್ಲ. ನನ್ನ ಮುಂದಿನ ರಾಜಕೀಯ ಜೀವನ ಏನಿದ್ದರೂ ಬಿಜೆಪಿಯಲ್ಲೇ. ಬಿಜೆಪಿ ಬಗ್ಗೆ ನಂಬಿಕೆ ಮತ್ತು ಗೌರವ ಇದೆ. ಪಕ್ಷ ನನ್ನನ್ನು ಗೌರವದಿಂದ ನೋಡಿಕೊಳ್ಳುತ್ತಿದೆ. ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅತ್ಯಂತ ಗೌರವದಿಂದ ಮಾತನಾಡಿಸುತ್ತಾರೆ’ ಎಂದು ಹೇಳಿದರು.

ADVERTISEMENT

‘ಡಿ.ಕೆ.ಶಿವಕುಮಾರ್ ಮನೆಗೆ ಯಾರೂ ಹಿಂಬಾಗಿಲಿನಿಂದ ಹೋಗಿಲ್ಲ, ಬುರ್ಕಾ ಹಾಕಿಕೊಂಡೂ ಹೋಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಡಿ.ಕೆ.ಶಿವಕುಮಾರ್‌ ತಮ್ಮ ರಾಜಕೀಯ ಗುರು ಎಂದು ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿಕೊಂಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಮತ್ತು ಡಿ.ಕೆ.ಸುರೇಶ್‌ 40 ವರ್ಷಗಳಿಂದ ಸ್ನೇಹಿತರು. ನನ್ನ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್‌. ಆದರೆ ಅದು ರಾಜಕೀಯ ಕಾರಣಕ್ಕೆ ಅಲ್ಲ. ನಮ್ಮ ಊರಿನ ಸಂಬಂಧ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಜತೆ ವ್ಯಕ್ತಿಗತ ದ್ವೇಷವಿಲ್ಲ’ ಎಂದೂ ಮುನಿರತ್ನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.