ಬೆಂಗಳೂರು: ರಾಜ್ಯೇತರ ನಾಗರಿಕ ಸೇವೆ (ನಾನ್ ಸ್ಟೇಟ್ ಸಿವಿಲ್ ಸರ್ವೀಸ್) ಹುದ್ದೆಗಳಿಂದ 2021ನೇ ಸಾಲಿನ ಐಎಎಸ್ ವೃಂದದ ನಾಲ್ಕು ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಗ್ರೂಪ್ ‘ಎ’ ವೃಂದದ ಅಧಿಕಾರಿಗಳಿಂದ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ.
ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆ ಅಕ್ಟೋಬರ್ ಕೊನೆಯಲ್ಲಿ ನಡೆಯಲಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನ.
ರಾಜ್ಯ ನಾಗರಿಕ ಸೇವಾ ವೃಂದದಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ತತ್ಸಮಾನವೆಂದು ನಿಗದಿಪಡಿಸಿದ ಗ್ರೂಪ್ ‘ಎ’ ವೃಂದದ ಗೆಜೆಟೆಡ್ ಹುದ್ದೆಯಲ್ಲಿ 2021ರ ಜ. 1ಕ್ಕೆ 8 ವರ್ಷ ಕರ್ತವ್ಯ ಸಲ್ಲಿಸಿದವರು ಮತ್ತುವಯೋಮಿತಿ 56 ವರ್ಷ ದಾಟ ದವರು ಅರ್ಜಿ ಸಲ್ಲಿಸಬಹುದು. ಆದರೆ, ರಾಜ್ಯ ಪೊಲೀಸ್ ಸೇವೆ, ಅರಣ್ಯ ಸೇವೆ ಮತ್ತು ನ್ಯಾಯಾಂಗ ಸೇವೆಯಲ್ಲಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
‘ಎರಡು ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕ ಆಧರಿಸಿ, ರ್ಯಾಂಕ್ ಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಪಟ್ಟಿಯಲ್ಲಿರುವ ಅಧಿಕಾರಿಗಳ ರಹಸ್ಯ ವರದಿ ಪರಿಗಣಿಸಿ, ಐಎಎಸ್ ಹುದ್ದೆಗೆ ಅರ್ಹರಾದವರ ಹೆಸರುಗಳನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ಸರ್ಕಾರ ಶಿಫಾರಸು ಮಾಡಲಿದೆ’ ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.