ADVERTISEMENT

ಬಳೆ ತೊಟ್ಟುಕೊಳ್ಳಿ ಎಂದ ಶೋಭಾ ತಿರುಗೇಟು ನೀಡಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಮೇ 2019, 20:24 IST
Last Updated 16 ಮೇ 2019, 20:24 IST
   

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದರೆ, ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಶಾಸಕರನ್ನು ಹಿಡಿದುಕೊಳ್ಳಲಾಗದಿದ್ದರೆ ಬಳೆ ತೊಟ್ಟು
ಕೊಳ್ಳಲಿ’ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್‌ ಕೊಟ್ಟ ಸಿದ್ದರಾಮಯ್ಯ, ‘ಶೋಭಾ ಹೆಣ್ಣು ಮಗಳು. ಅವರ ಕೈಯಲ್ಲಿ ಬಳೆ ಇದೆಯಾ? ಅವರೇ ತೊಟ್ಟಿಲ್ಲ. ನಾನ್ಯಾಕೆ ತೊಡಲಿ’ ಎಂದಿದ್ದಾರೆ.

‘ಯಡಿಯೂರಪ್ಪ ಅವರು ಕಾಂಗ್ರೆಸ್‌ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ’ ಎಂಬ ಪ್ರಶ್ನೆ ಶೋಭಾ, ‘ಅವರವರ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಅದನ್ನು ಮಾಡಲಾಗದಿದ್ದರೆ, ಅವರೆಂತಹ ನಾಯಕ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ತಮ್ಮ ಶಾಸಕರ ಸಮಾಧಾನಪಡಿಸಲು ಸಾಧ್ಯವಾಗದ ಸಿದ್ದರಾಮಯ್ಯ ಅವರು, ಅನವಶ್ಯಕವಾಗಿ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ, ಕಾಂಗ್ರೆಸ್‌ ಹೈಕಮಾಂಡ್‌ಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಟೀಕೆಗೆ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಓರ್ವ ಹೆಣ್ಣಾಗಿ ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಕಿತ್ತೂರು ರಾಣಿ ಚನ್ನಮ್ಮ, ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೇ ಸಾಧನೆಯ ಉತ್ತುಂಗಕ್ಕೇರಿದವರು’ ಎಂದು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.