ADVERTISEMENT

ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ: ಡಿ.ವಿ. ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 16:47 IST
Last Updated 12 ಜೂನ್ 2021, 16:47 IST
ಸದಾನಂದಗೌಡ
ಸದಾನಂದಗೌಡ   

ಬೆಂಗಳೂರು: ಸಹಕಾರಿ ಕ್ಷೇತ್ರದ ಇಫ್ಕೋ ಕಂಪನಿ ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಗುಜರಾತ್‌ನ ಕಲೋಲ್‌ನಿಂದ ರಾಜ್ಯಕ್ಕೆ ತಲಾ 500 ಮಿ.ಲೀ.ಯ 16,600 ನ್ಯಾನೋ ಯೂರಿಯಾ ಗೊಬ್ಬರದ ಬಾಟಲಿಗಳನ್ನು ಹೊತ್ತ ಮೊದಲ ವಾಹನದ ಸಂಚಾರಕ್ಕೆ ಶನಿವಾರ ಸಂಜೆ ವರ್ಚ್ಯುಯಲ್‌ ಆಗಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಇಫ್ಕೋ ಕಂಪನಿ ಈಗಾಗಲೇ ಮೂರು ಕಡೆ ನ್ಯಾನೋ ಯೂರಿಯಾ ಘಟಕಗಳನ್ನು ಸ್ಥಾಪಿಸಿದೆ. ಇನ್ನೂ ನಾಲ್ಕು ಸ್ಥಳಗಳಲ್ಲಿ ಹೊಸ ಘಟಕಗಳನ್ನು ಆರಂಭಿಸಲಿದೆ‘ ಎಂದರು.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ನ್ಯಾನೋ ಯೂರಿಯಾ ಘಟಕ ಆರಂಭಿಸುವ ಯೋಚನೆ ಇದೆ. ಹತ್ತು ದಿನಗಳಲ್ಲಿ ಸೂಕ್ತ ಜಮೀನು ಗುರುತಿಸಲಾಗುವುದು ಎಂದು ಹೇಳಿದರು.

ADVERTISEMENT

ಇಫ್ಕೋ ಪ್ರಸಕ್ತ ಹಂಗಾಮಿನಲ್ಲಿ 28 ಕೋಟಿ ಬಾಟಲಿಯಷ್ಟು ನ್ಯಾನೋ ಯೂರಿಯಾ ಗೊಬ್ಬರ ಉತ್ಪಾದಿಸುವ ಗುರಿ ಹೊಂದಿದೆ. 500 ಮಿ.ಲೀ. ನ್ಯಾನೋ ಯೂರಿಯಾ ಬಾಟಲಿಯು 45 ಕೆ.ಜಿ. ಯೂರಿಯಾ ಗೊಬ್ಬರಕ್ಕೆ ಸಮನಾದುದು. ನ್ಯಾನೋ ಗೊಬ್ಬರದಿಂದ ದೇಶದಲ್ಲಿ ಯೂರಿಯಾ ಬಳಕೆಯಲ್ಲಿ ಶೇಕಡ 20ರಷ್ಟು ಕಡಿಮೆಯಾಗಲಿದೆ. ರೈತರ ಕೃಷಿ ವೆಚ್ಚವೂ ತಗ್ಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.