ಬೆಂಗಳೂರು: ‘ಆರ್.ರೋಷನ್ ಬೇಗ್ ಐಎಂಎ (ಐ ಮಾನಿಟರಿ ಅಡ್ವೈಸರಿ) ಪ್ರಕರಣದಲ್ಲಿ ‘ಸಾಕ್ಷಿ’ ಆಗಿದ್ದು ಅವರಿಗೆ ರಕ್ಷಣೆ, ಸ್ವಾತಂತ್ರ್ಯ ಮತ್ತು ಅವರ ಮುಕ್ತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ, ಎಸ್ಐಟಿ ಮುಖ್ಯಸ್ಥರಾಗಿದ್ದ ಬಿ.ಆರ್. ರವಿಕಾಂತೇಗೌಡ ಅವರಿಗೆ ಬರೆದಿರುವ ಪತ್ರ ಈಗ ಕಾನೂನು ತಜ್ಞರ ವಲಯದಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ.
ಬೇಗ್ ಅವರನ್ನು ಪೊಲೀಸರು 2019ರ ಜುಲೈ 16ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಿ ಮರುದಿನ ಮಧ್ಯಾಹ್ನ ಬಿಡುಗಡೆ ಮಾಡಿದ್ದರು. ಆದರೆ, 2019ರ ಜುಲೈ 17ರಂದು ರಾಜ್ಯಪಾಲರು ರವಿಕಾಂತೇಗೌಡರಿಗೆ ಪತ್ರ ಬರೆದು ರಕ್ಷಣೆಗೆ ಸೂಚಿಸಿದ್ದರು.
‘ರಾಜ್ಯಪಾಲರ ಪತ್ರ ಆಭಾಸಕಾರಿ ಮತ್ತು ವಿಚಿತ್ರ ನಿಲುವಿನಿಂದ ಕೂಡಿದೆ’ ಎಂಬುದು ಸುಪ್ರೀಂ ಕೋರ್ಟ್ ವಕೀಲ ಕೆ.ವಿ.ಧನಂಜಯ ಅವರ ಅಭಿಪ್ರಾಯ.
ಹಿರಿಯ ವಕೀಲ ಸಿ.ಎಚ್.ಹನುಮಂತರಾಯ, ‘ಕೇಂದ್ರ ಸರ್ಕಾರವೇ ರಾಜ್ಯಪಾಲರ ಮುಖಾಂತರ ಈ ರೀತಿ ಹೇಳಿಸಿದೆ’ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
‘ಶಂಕಿತರನ್ನು ಸಾಕ್ಷಿ ಎಂದು ಬಿಂಬಿಸುವ ಪ್ರಯತ್ನ ಸಾಂವಿಧಾನಿಕ ಹುದ್ದೆ ದುರುಪಯೋಗ ಪಡಿಸಿಕೊಂಡಂತೆ’ ಎನ್ನುತ್ತಾರೆ ವಕೀಲ ಕೆ.ಬಿ.ಕೆ ಸ್ವಾಮಿ.
ಐಎಂಎ ಪ್ರಕರಣವನ್ನು ಸದ್ಯ ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.