ಮಂಗಳೂರು: ಇಲ್ಲಿನ ಎನ್ಎಂಪಿಟಿಯಿಂದ 140 ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 11 ಮಂದಿ ಮೀನುಗಾರರನ್ನು ಭಾನುವಾರ ಬೆಳಿಗ್ಗೆ ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.
ತಮಿಳುನಾಡಿನ ಐಎಫ್ಬಿ ಎವಿಕೆಎಂ ಬೋಟ್ನಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಮುಂಬೈನ ಕಡಲ ರಕ್ಷಣಾ ಸಹಕಾರ ಕೇಂದ್ರ (ಎಂಆರ್ಸಿಸಿ) ಮಾಹಿತಿ ಬಂದಿದ್ದು, ತಕ್ಷಣವೇ ಎಂಆರ್ಸಿಸಿಯ ಸಚೇತ್ ಮತ್ತು ಸುಜೀತ್ ಹಡಗುಗಳು ರಕ್ಷಣಾ ಕಾರ್ಯಾಚರಣೆ ಧಾವಿಸಿದವು. ಜೊತೆಗೆ ಅನಾಹುತಕ್ಕೀಡಾದ ಬೋಟ್ನ ಸನಿಹದಲ್ಲಿದ್ದ ಸರಕು ಸಾಗಣೆ ಹಡಗುಗಳಿಗೂ ಮಾಹಿತಿ ರವಾನಿಸಲಾಯಿತು. 3 ಗಂಟೆಯಲ್ಲಿಯೇ ಕರಾವಳಿ ಕಾವಲು ಪಡೆಯ ತಂಡವೂ ಸ್ಥಳಕ್ಕೆ ಧಾವಿಸಿತು.
ಪಡೆಯ ನಿಗಾ ವಿಮಾನ ಸಿಸಿ ಡ್ರೋನಿಯರ್ ಅನ್ನು ಬೋಟ್ ಇರುವ ಸ್ಥಳಕ್ಕೆ ತೆರಳಲು ಸೂಚಿಸಲಾಯಿತು. ಬೆಳಿಗ್ಗೆ 11.15ಕ್ಕೆ ವಿಮಾನವು ಬೆಂಕಿ ಅನಾಹುತ ಸಂಭವಿಸಿದ ಬೋಟ್ ಅನ್ನು ಪತ್ತೆ ಮಾಡಿತು. ಬೋಟ್ನಲ್ಲಿದ್ದವರ ಜೊತೆಗೆ ಸಂಪರ್ಕ ಸಾಧಿಸಿ, ಧೈರ್ಯ ತುಂಬಲಾಯಿತು.
ಮಧ್ಯಾಹ್ನ 1 ಗಂಟೆಗೆ ಸಚೇತ್ ಮತ್ತು ಸುಜೀತ್ ಹಡಗುಗಳು ಬೋಟ್ ಇರುವ ಸ್ಥಳಕ್ಕೆ ಬಂದಿದ್ದು, ಕೂಡಲೇ ಬೋಟ್ನಲ್ಲಿದ್ದ 11 ಜನರನ್ನು ರಕ್ಷಣೆ ಮಾಡಿದವು. ಗಾಯಗೊಂಡಿದ್ದ ಮೀನುಗಾರರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಎಲ್ಲರನ್ನು ಎನ್ಎಂಪಿಟಿಗೆ ಕರೆತಂದಿದ್ದು, ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ಸಿ.ಜಿ. ವೆಂಕಟೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.