ADVERTISEMENT

ಒಳ ಮೀಸಲಾತಿ: ಪರಿಶಿಷ್ಟರಲ್ಲಿ ಒಮ್ಮತ ಯತ್ನ- ಶಾಸಕ ನರೇಂದ್ರಸ್ವಾಮಿ

ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಸಮುದಾಯಗಳ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 15:57 IST
Last Updated 28 ಆಗಸ್ಟ್ 2024, 15:57 IST
ಪಿ.ಎಂ. ನರೇಂದ್ರಸ್ವಾಮಿ
ಪಿ.ಎಂ. ನರೇಂದ್ರಸ್ವಾಮಿ   

ಬೆಂಗಳೂರು: ಎಲ್ಲ ಪರಿಶಿಷ್ಟ ಸಮುದಾಯಗಳನ್ನು ಒಂದೇ ಸೂರಿನಡಿ ತಂದು ಒಳ ಮೀಸಲಾತಿ ಜಾರಿಗೊಳಿಸುವಂತೆ ಒಮ್ಮತದಿಂದ ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಕಾಂಗ್ರೆಸ್‌ ಶಾಸಕ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದ ‘ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ಸಮಿತಿ’ ಯತ್ನ ಮುಂದುವರಿಸಿದೆ.

ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಕಾರಣ ಸಮುದಾಯದ ಪ್ರಮುಖರನ್ನು ಒಗ್ಗೂಡಿಸಲು ಸಮಿತಿ ಸಭೆಗಳನ್ನು ನಡೆಸುತ್ತಿದೆ. 

ಪರಿಶಿಷ್ಟ ಸಮುದಾಯದ ಸ್ವಾಮೀಜಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರ ಜೊತೆ ಶಾಸಕರ ಭವನದಲ್ಲಿ ನರೇಂದ್ರಸ್ವಾಮಿ ಅವರು ಬುಧವಾರ ಚರ್ಚೆ ನಡೆಸಿದರು. ಒಳ ಮೀಸಲಾತಿ ಜಾರಿಗೆ ಅಡ್ಡಿಯಾಗಿರುವ ಸಮುದಾಯಗಳ ನಡುವಿನ ಆಂತರಿಕ ತಿಕ್ಕಾಟವನ್ನು ಮಾತುಕತೆ– ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳುವ ತುರ್ತು ಅಗತ್ಯದ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು

ADVERTISEMENT

ರಾಜ್ಯದಲ್ಲಿ ಪರಿಶಿಷ್ಟರಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ನೀಡಿದೆ. ಆದರೆ, ರಾಜಕೀಯವೂ ಸೇರಿದಂತೆ ನಾನಾ ಕಾರಣಗಳಿಗೆ ಈ ವರದಿ ಬಹಿರಂಗ ಆಗಿಲ್ಲ. ವರದಿಯಲ್ಲಿ ಒಳ ಮೀಸಲಾತಿ ವರ್ಗೀಕರಣದ ಪ್ರಸ್ತಾವ ಇದ್ದರೂ ಹೆಚ್ಚಳಗೊಂಡ ಮೀಸಲಾತಿ ಪ್ರಮಾಣ, ಜನಸಂಖ್ಯೆ, ಸಮುದಾಯಗಳ ಸದ್ಯದ ಸ್ಥಿತಿಗತಿಯನ್ನು ಪರಿಗಣಿಸಿ, ಎಲ್ಲ ಭಿನ್ನಾಭಿಪ್ರಾಯಗಳಿಗೆ ಸೌಹಾರ್ದಯುತ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ನಂತರ ಒಳ ಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿದ್ದ ಪ್ರಮುಖರು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಬಳಿಕ ಮಾತನಾಡಿದ ನರೇಂದ್ರಸ್ವಾಮಿ, ‘ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಮೊದಲ ಸಭೆ ಈಗಾಗಲೇ ನಡೆಸಿದ್ದೇವೆ. ಇಂದಿನ ಸಭೆಗೆ ಶಾಸಕರು, ಸ್ವಾಮೀಜಿಗಳನ್ನು ಆಹ್ವಾನಿಸಿದ್ದೆವು. ರುದ್ರಪ್ಪ ಲಮಾಣಿ, ಶಿವರಾಜ ತಂಗಡಗಿಯವರು ಅನಿವಾರ್ಯ ಕಾರಣಗಳಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಒಳ ಮೀಸಲಾತಿ ಜಾರಿಗೆ ತರುವುದಕ್ಕಾಗಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ’ ಎಂದರು.

ಜ್ಞಾನ ಪ್ರಕಾಶ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಸುಧಾಮ್‌ ದಾಸ್‌, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌, ವಿವಿಧ ಸಂಘಟನೆಗಳ ಪ್ರಮುಖರಾದ ಬಿ. ಗೋಪಾಲ್‌, ಮಾವಳ್ಳಿ ಶಂಕರ್, ಹೆಣ್ಣೂರು ಶ್ರೀನಿವಾಸ್‌, ಎನ್‌. ವೆಂಕಟೇಶ್‌, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಬಾಬು, ಸಿದ್ದರಾಜು ಮುಂತಾದವರು ಸಭೆಯಲ್ಲಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.