ADVERTISEMENT

ಮಡಕಶಿರಾದಲ್ಲಿ ಕೈಗಾರಿಕೆ ಸ್ಥಾಪನೆ ಪರಿಶೀಲನೆ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:47 IST
Last Updated 14 ಸೆಪ್ಟೆಂಬರ್ 2024, 15:47 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಮಡಕಶಿರಾದಲ್ಲಿ ಕೈಗಾರಿಕೆ ಸ್ಥಾಪಿಸುವುದರಿಂದ ಪಾವಗಡ, ಶಿರಾ, ಮಧುಗಿರಿ, ಹಿರಿಯೂರು ಭಾಗದ ಜನರಿಗೆ ಅನುಕೂಲ ಆಗುತ್ತದೆ. ಈ ಸಂಬಂಧ ಉದ್ಯಮಿಗಳ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಡಕಶಿರಾ ಶಾಸಕ ಎಂ.ಎಸ್‌.ರಾಜು ಮತ್ತು ಪಾವಗಡ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೈಗಾರಿಕೆ ಸ್ಥಾಪನೆಗೆ ಮನವಿ ಸಲ್ಲಿಸಿದ್ದರು. ‘ಮಡಕಿಶಿರಾದ ಸುಮಾರು 40,000 ಮಂದಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಪಾವಗಡ ಸಮೀಪವೇ 1,600 ಎಕರೆ ಜಮೀನು ಇದೆ. ಅಲ್ಲಿ ಕೈಗಾರಿಕೆ ಸ್ಥಾಪಿಸಿದರೆ ಅನುಕೂಲವಾಗಲಿದೆ’ ಎಂದು ಮನವಿ ಸಲ್ಲಿಸಿದರು.

‘ಈ ಪ್ರದೇಶಕ್ಕೆ ಸೂಕ್ತವಾಗುವ ಕೈಗಾರಿಕೆ ಸ್ಥಾಪನೆ ಸಂಬಂಧ ಉದ್ದಿಮೆದಾರರ ಜತೆ ಚರ್ಚಿಸುತ್ತೇನೆ. ಉದ್ದಿಮೆ ಸ್ಥಾಪನೆಯಾದರೆ, ಜನರು ಕೆಲಸಕ್ಕಾಗಿ ವಲಸೆ ಹೋಗುವುದು ತಪ್ಪುತ್ತದೆ’ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಅವರು ಜನರ ಅಹವಾಲುಗಳನ್ನು ಸ್ವೀಕರಿಸಿದರು. ‘ಆಂಧ್ರ ಪ್ರದೇಶದ ಮಡಕಶಿರಾ ಮತ್ತಿತರ ಪ್ರದೇಶದಲ್ಲಿ ಇರುವ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪ್ರವರ್ಗಕ್ಕೆ, ಕುಂಚಿಟಿಗ, ಸಾದರ ಮತ್ತು ವೀರಶೈವರನ್ನು ಹಿಂದುಳಿದ ವರ್ಗಗಳಿಗೆ ಸೇರಿಸುವ ಸಂಬಂಧ ಕೇಂದ್ರ ಗೃಹ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವರ ಜತೆ ಚರ್ಚಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.