ಮೈಸೂರು: ‘ಮಹಾತ್ಮ ಗಾಂಧಿ ಬಹಳ ಒಳ್ಳೆಯವರು. ಆದರೆ, ಮಗ ಕುಡುಕನಾದ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಗುಣಗಳು ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲ ಮಕ್ಕಳಿಗೆ ಬರುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಸವರಾಜ ಬೊಮ್ಮಾಯಿ ಅವರ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಸರ್ಕಾರದ ಮೇಲೆ ಅವರು ಸಹಜವಾಗಿ ಹಿಡಿತ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾಗುತ್ತದೆಯೇ? ಬಿಜೆಪಿಯ ಸಿದ್ಧಾಂತ, ಸರ್ಕಾರದ ನೀತಿಗಳು ಬದಲಾಗುತ್ತವೆಯೇ?’ ಎಂದು ಪ್ರಶ್ನಿಸಿದರು.
‘ಈಗಲೇ ಅವರ ಮೇಲೆ ಸುಮ್ಮನೇ ದೂರುವುದಿಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ’ ಎಂದರು.
‘ಸೂಪರ್ ಮುಖ್ಯಮಂತ್ರಿ’ ಆರೋಪದಿಂದ ಮುಕ್ತನಾಗಿರುವೆ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ, ‘ಅಂದರೆ ಸೂಪರ್ ಮುಖ್ಯಮಂತ್ರಿ ಆಗಿದ್ದರು ಎಂಬುದು ಅವರ ಮಾತಿನ ಅರ್ಥವೇ? ಅದನ್ನು ಒಪ್ಪಿಕೊಂಡಂತೆ ಅಲ್ಲವೇ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.