ADVERTISEMENT

’ಐಟಿ ದಾಳಿ: ರಾಜಕೀಯ ಬಣ್ಣದ ಅಗತ್ಯವಿಲ್ಲ’

ಕನ್ನಡ ಚಲನಚಿತ್ರ ಮತ್ತು ಕಿರುತೆರೆ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:37 IST
Last Updated 5 ಜನವರಿ 2019, 19:37 IST

ಧಾರವಾಡ: ‘ಕನ್ನಡದಲ್ಲಿ ಅದ್ದೂರಿ ಬಜೆಟ್‌ನ ಚಲನಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಇದರ ಪರಿಣಾಮವನ್ನು ಸದ್ಯ ನೋಡುತ್ತಿದ್ದೇವೆ’ ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

‘ಕನ್ನಡ ಚಲನಚಿತ್ರ ಮತ್ತು ಕಿರುತೆರೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು ಚಲನಚಿತ್ರ ನಟರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಮಾತನಾಡಿದರು.

‘ಚಲನಚಿತ್ರ ರಂಗ ಉದ್ಯಮವಾಗಿರುವುದರಿಂದ ಚಲನಚಿತ್ರ ನಟರು ಅಪಾರ ಹಣ ಗಳಿಸುತ್ತಿದ್ದಾರೆ. ಈ ಹಣದ ಬಗ್ಗೆ ಲೆಕ್ಕ ನೀಡಿದರೆ ಸಾಕು. ಅಭಿಮಾನಿಗಳು ಹೆದರುವ ಅಗತ್ಯವಿಲ್ಲ. ಯಾರೂ ಜೈಲಿಗೆ ಹೋಗುವುದಿಲ್ಲ. ಹಣ ಹೇಗೆ ಬಂತು. ಎಲ್ಲಿಂದ ಬಂತು ಎನ್ನುವ ಬಗ್ಗೆ ಅಧಿಕಾರಿಗಳು ವಿವರ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ಡಬ್ಬಿಂಗ್‌ ತಡೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯಬೇಕು. ಚಲನಚಿತ್ರ ರಂಗ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಕನ್ನಡ ಚಲನಚಿತ್ರ ರಂಗ ಇನ್ನೂ ದುರಂತದ ಹಂತಕ್ಕೆ ತಲುಪಿಲ್ಲ. ದುರಂತಕ್ಕೆ ತಲುಪುವ ಮುನ್ನ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಕಿರುತೆರೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕುರಿತು ಮಾತನಾಡಿದ ನಿರ್ದೇಶಕ ಪಿ. ಶೇಷಾದ್ರಿ, ’ಟಿವಿಗಳು ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿವೆ. ಸಂಬಂಧಗಳನ್ನು ಹಾಳು ಮಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.