ADVERTISEMENT

ಕಾವೇರಿ ಕೂಗು: ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 19:30 IST
Last Updated 24 ಮಾರ್ಚ್ 2021, 19:30 IST
ಜಗ್ಗಿ ವಾಸುದೇವ್
ಜಗ್ಗಿ ವಾಸುದೇವ್   

ಬೆಂಗಳೂರು: ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್‌) ಸ್ವಯಂ ಪ್ರೇರಿತ ಅರ್ಜಿಯನ್ನಾಗಿ ಮಾರ್ಪಡಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಈಶಾ ಔಟ್‌ರಿಚ್‌’ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೆಲ್ಮನವಿ(ಎಸ್‌ಎಲ್‌ಪಿ) ಸಲ್ಲಿಸಿದೆ.

2020ರ ಅಕ್ಟೋಬರ್ 15ರಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಈಶಾ ಔಟ್‌ರಿಚ್‌ ಪರ ವಕೀಲರು ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದರು. ವಿಚಾರಣೆಯನ್ನು 2021ರ ಮೇ 25ಕ್ಕೆ ಪೀಠ ಮುಂದೂಡಿತು.

ಮೂಲ ಅರ್ಜಿದಾರರಾದ ವಕೀಲ ಎ.ವಿ. ಅಮರನಾಥ್ ಅವರು ಡಿಸ್ಕವರಿ ವಾಹಿನಿಗೆ ನೋಟಿಸ್ ನೀಡಿ, ಕಾವೇರಿ ಕೂಗು ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಿಳಿಸಿದ್ದರು. ಅದನ್ನು ಸಮರ್ಥಿಸಿಕೊಂಡ ಕಾರಣಕ್ಕೆ ಅವರನ್ನು ವಿಚಾರಣೆಯಿಂದ ನ್ಯಾಯಾಲಯ ಕೈಬಿಟ್ಟು ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದೆ.

ADVERTISEMENT

‘ಕಾವೇರಿ ಜಲಾನಯನ ಪ್ರದೇಶದಲ್ಲಿ 253 ಕೋಟಿ ಸಸಿಗಳನ್ನು ನೆಡುವ ಉದ್ದೇಶಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅನುಮತಿ ನೀಡಿವೆ ಎಂದು ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ಅವರು ಸುಳ್ಳು ಹೇಳಿಕೊಂಡಿದ್ದಾರೆ’ ಎಂದು ಅಮರನಾಥ್ ಅವರು ಪಿಐಎಲ್ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.