ADVERTISEMENT

ಸರ್ಕಾರ ಪತನ | ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಬಹಿರಂಗ ಅಸಮಾಧಾನ

ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದೆ ಸಂಕಷ್ಟ–ಎಸ್‌.ಟಿ.ಸೋಮಶೇಖರ್ ವರ್ತನೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:59 IST
Last Updated 28 ಜುಲೈ 2019, 19:59 IST
   

ಬೆಂಗಳೂರು: ಯಶವಂತಪುರದ ಶಾಸಕ ಎಸ್‌.ಟಿ.ಸೋಮಶೇಖರ್‌ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾಂಗ್ರೆಸ್‌ನವರು ಇಂತಹ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ಜೆಡಿಎಸ್‌ನಿಂದ ವ್ಯಕ್ತವಾಯಿತು.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಸಮ್ಮುಖದಲ್ಲೇ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅಸಮಾಧನ ವ್ಯಕ್ತಪಡಿಸಿದರು.

‘ಎಸ್.ಟಿ.ಸೋಮಶೇಖರ್ ಸ್ವಾರ್ಥ ಮತ್ತು ಅಧಿಕಾರಕ್ಕಷ್ಟೇ ಸೀಮಿತ. ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್‌ನವರುಸರಿಯಾಗಿ ಇದ್ದಿದ್ದರೆಈ ಸರ್ಕಾರ ಬೀಳುತ್ತಾ ಇರಲಿಲ್ಲ. ಅವರ ಶಾಸಕರನ್ನು‌ ರಕ್ಷಣೆ ಮಾಡಿಕೊಂಡಿದ್ದರೆಈ ಸ್ಥಿತಿ ಬರುತ್ತಿರಲಿಲ್ಲ.ನೀವೇ ಮುಖ್ಯಮಂತ್ರಿ ಸ್ಥಾನ ಇಟ್ಟುಕೊಳ್ಳಿ ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಹೇಳಿದರೂ ಏನೂ ಪ್ರಯೋಜನ ಆಗಲಿಲ್ಲ.ಕಳೆದ ಚುನಾವಣೆ ವೇಳೆ ಜೆಡಿಎಸ್‌ ಬಿಜೆಪಿ ಬಿ ಟೀಂ ಅಂದರು. ಇದರಿಂದ ನಮಗೆ ಬರಬೇಕಿದ್ದ ಮುಸ್ಲಿಂ ಮತಗಳು ಬರಲಿಲ್ಲ’ ಎಂದು ಹೇಳಿದರು.

ADVERTISEMENT

ದೋಸ್ತಿ ಇಲ್ಲ: ‘ಇನ್ನು ಮುಂದೆಯಾವುದೇ ದೋಸ್ತಿ ಇಲ್ಲ. ಈಗಾಗಲೇ ದೋಸ್ತಿಯಿಂದ ಸಾಕಷ್ಟು ತೊಂದರೆ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದೆ.ನಾವಂತೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡುವ ಮಾತೇ ಇಲ್ಲ.ಸ್ವತಂತ್ರವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲೋಣ’ ಎಂದು ಸಲಹೆ ನೀಡಿದರು.

ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರ ವಿಧಾನಸಭಾ ಕಾರ್ಯಕರ್ತರ ಸಭೆಯಲ್ಲಿ ಅತೃಪ್ತ ಶಾಸಕರನ್ನು ಸೋಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.

ಕಾಂಗ್ರೆಸ್‌ ತೀರ್ಮಾನದ ಮೇಲೆ ಅವಲಂಬಿತ
ರಾಜ್ಯದಲ್ಲಿ ದೋಸ್ತಿ ಮುಂದುವರಿಸಬೇಕೇ ಎಂಬ ವಿಷಯ ಕಾಂಗ್ರೆಸ್‌ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಬೆಂಗಳೂರಿನ ನಾಲ್ಕೂ ಅತೃಪ್ತ ಶಾಸಕರನ್ನು ಸೋಲಿಸುವ ನಿಟ್ಟಿನಲ್ಲಿ ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅನರ್ಹಗೊಂಡ ಶಾಸಕರು ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ಮಾಡುತ್ತೇವೆ ಎಂದು ಹೇಳಿದ್ದಾರೆ.ಅವರು ಬಂದು ಮೊದಲು ಮಾತನಾಡಲಿ.ನನ್ನ ಬಗ್ಗೆ ಏನು ಹೇಳ್ತಾರೆ, ಕುಮಾರಸ್ವಾಮಿ ಬಗ್ಗೆ ಏನು ಆರೋಪ ಮಾಡುತ್ತಾರೆ ನೋಡೋಣ.ಆಮೇಲೆ ನಾನು ಪ್ರತಿಕ್ರಿಯೆ ಕೊಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.