ADVERTISEMENT

ಸರ್ವೆ ಇಲಾಖೆ ಅಧಿಕಾರಿಗೆ ಶಾಸಕ ಮಹದೇವ್ ಧಮ್ಕಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 16:39 IST
Last Updated 27 ಡಿಸೆಂಬರ್ 2018, 16:39 IST

ಪಿರಿಯಾಪಟ್ಟಣ: ಅಧಿಕಾರಿಯೊಬ್ಬರಿಗೆ ಪಿರಿಯಾಪಟ್ಟಣ ಜೆಡಿಎಸ್‌ ಶಾಸಕ ಕೆ.ಮಹದೇವ್ ಧಮ್ಕಿ ಹಾಕಿರುವ ಆಡಿಯೊ ಸಾಮಾಜಿಕ ಜಾಲಣತಾಣದಲ್ಲಿ ಹರಿದಾಡುತ್ತಿದೆ.

ಸರ್ವೆ ಇಲಾಖೆಯ ಮಂಜೇಗೌಡ ಎಂಬುವರಿಗೆ ಕರೆ ಮಾಡಿ ಮಾತನಾಡಿರುವ ಮಹದೇವ್, ‘ಮಾಜಿ ಶಾಸಕ ಕೆ.ವೆಂಕಟೇಶ್ (ಕಾಂಗ್ರೆಸ್‌) ಅವರ ಮಾತು ಕೇಳುತ್ತಿದ್ದೀಯಾ, ನಾನು ಹೇಳಿದಂತೆ ಕೇಳುವುದಿದ್ದರೆ ತಾಲ್ಲೂಕಿನಲ್ಲಿ ಇರು, ಇಲ್ಲದಿದ್ದಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗು’ ಎಂದಿರುವುದು ಆಡಿಯೊದಿಂದ ಬಹಿರಂಗಗೊಂಡಿದೆ.

ಇದರ ಜೊತೆಗೆ ಕಾಂಗ್ರೆಸ್‌ ಕಾರ್ಯಕರ್ತರ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಆಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕೆ.ಮಹದೇವ್, ‘ಇದು ನನ್ನ ಧ್ವನಿಯಲ್ಲ, ಯಾರೋ ಅನುಕರಣೆ ಮಾಡಿದ್ದಾರೆ. ನಾನು ಮಂಜೇಗೌಡರೊಂದಿಗೆ ಮಾತನಾಡಿದ್ದು ನಿಜ, ಆದರೆ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ’ ಎಂದಿದ್ದಾರೆ.

ಈ ಬಗ್ಗೆ ಮಂಜೇಗೌಡ ಪ್ರತಿಕ್ರಿಯಿಸಿ, ‘ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಶಾಸಕರು ನನ್ನೊಂದಿಗೆ ಒರಟಾಗಿ ಮಾತನಾಡಿದರು. ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಹಾಲಿ ಮತ್ತು ಮಾಜಿ ಶಾಸಕರ ನಡುವಿನ ರಾಜಕೀಯ ಪ್ರತಿಷ್ಠೆಯಿಂದಾಗಿ ನಾವು ಸಂಕಷ್ಟ ಎದುರಿಸಬೇಕಿದೆ’ ಎಂದು ನೋವು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.