ಬೆಂಗಳೂರು:ವಿಧಾನ ಪರಿಷತ್ನಲ್ಲಿ ಮಂಗಳವಾರ ಮಂಡನೆಯಾಗಲಿರುವ ಗೋಹತ್ಯೆ ನಿಷೇಧ ಮಸೂದೆ-2020 ಅನ್ನು ವಿರೋಧಿಸುವುದಾಗಿ ಜೆಡಿಎಸ್ ಪ್ರಕಟಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, 'ಬಿಜೆಪಿ ಸರ್ಕಾರ ಮಂಡಿಸುತ್ತಿರುವ ಮಸೂದೆಯು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಲಿದೆ. ಶಾಂತಿಯನ್ನು ಹಾಳು ಮಾಡಲಿದೆ. ಆದ್ದರಿಂದ ನಮ್ಮ ಪಕ್ಷ ಸಂಪೂರ್ಣವಾಗಿ ಮಸೂದೆಯನ್ನು ವಿರೋಧಿಸಲಿದೆ' ಎಂದು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ-1964 ಜಾರಿಯಲ್ಲಿದೆ. 2010ರಲ್ಲೂ ಕಾಯ್ದೆಯಲ್ಲಿ ಬದಲಾವಣೆ ಮಾಡಲು ಆಗಿನ ಬಿಜೆಪಿ ಸರ್ಕಾರ ಯತ್ನಿಸಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜತೆಯಾಗಿ ವಿರೋಧಿಸಿದ್ದವು. ತಾವು ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗೆ ಒಪ್ಪಿಗೆ ನೀಡದಂತೆ ಒತ್ತಾಯಿಸಿದ ಬಳಿಕ ಸ್ಪಷ್ಟನೆ ಕೇಳಿದ್ದರು. ಆ ಬಳಿಕ ಸರ್ಕಾರದ ನೇತೃತ್ವ ಬದಲಾಗಿದ್ದರಿಂದ ಹಳೆಯ ಕಾಯ್ದೆಯೇ ಜಾರಿಯಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.
2010ರಂತೆ ಈಗಲೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜೆಡಿಎಸ್ ಸಂಪೂರ್ಣವಾಗಿ ವಿರೋಧಿಸುತ್ತದೆ. 1964ರ ಕಾಯ್ದೆಯಲ್ಲೇ ಗೋಹತ್ಯೆ ತಡೆಗೆ ಸಾಕಷ್ಟು ಅವಕಾಶಗಳಿವೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.