ADVERTISEMENT

ಬಿಜೆಪಿಯಿಂದ ಕಾಂಗ್ರೆಸ್‌ಗೆ ಮರಳಿದ ಜೆ.ಡಿ.ನಾಯ್ಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 8:56 IST
Last Updated 20 ಫೆಬ್ರುವರಿ 2019, 8:56 IST
   

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದ ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ ಬುಧವಾರ ಮಾತೃಪಕ್ಷ ಕಾಂಗ್ರೆಸ್‌ಗೆ ಮರಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಮತ್ತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್ ಇದ್ದರು.

ದಿನೇಶ್ ಗುಂಡೂರಾವ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರವೇ ಬಿಜೆಪಿಗೆ ಅಸ್ತ್ರವಾಗಿದೆ. ದಲಿತರ ಪರ, ಹಿಂದುಳಿದವರ ಪರ ಬಿಜೆಪಿಗೆ ಒಲವು ಇಲ್ಲ. ಹೀಗಾಗಿ ಜೆ.ಡಿ.ನಾಯ್ಕ ಮತ್ತೆ ಪಕ್ಷಕ್ಕೆ ವಾಪಸಾಗಿದ್ದಾರೆ. ಅವರ ವಾಪಸಾತಿಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.

ADVERTISEMENT

ಅನಂತ್ ಕುಮಾರ್ ಹೆಗಡೆ ಐದು ಬಾರಿ ಆರಿಸಿ ಬಂದಿದ್ದಾರೆ. ಅವರು ಲೋಕಸಭೆಯಲ್ಲೂ ಕ್ರೀಯಾಶೀಲರಾಗಿಲ್ಲ. ಪ್ರಚೋದನಕಾರಿ ಭಾಷಣ ಮಾಡುವುದಷ್ಟೇ ಅವರ ಸಾಧನೆ. ಯಾವುದೇ ಕೆಲಸ ಕಾರ್ಯಗಳನ್ನೂ ಅವರು ಮಾಡಿಲ್ಲ. ಹೀಗಾಗಿ ಜೆ.ಡಿ.ನಾಯ್ಕ ಮತ್ತೆ ವಾಪಸ್ ಆಗಿದ್ದಾರೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜೆ.ಡಿ. ನಾಯ್ಕ ಪ್ರತಿಕ್ರಿಯಿಸಿ, ‘ನಾನು ಜೀವನದಲ್ಲಿ ಮತ್ತೆ ಕಾಂಗ್ರೆಸ್ ಬಿಟ್ಟು ತಪ್ಪು ಮಾಡಲ್ಲ. 2018 ರಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು 6 ತಿಂಗಳು ಬಿಜೆಪಿಯಲ್ಲಿದ್ದೆ. ಆದರೆ ಅಲ್ಲಿರಲು ನನಗೆ ಸಾಧ್ಯವಾಗಲಿಲ್ಲ’ ಎಂದರು.

ಸೀಟು ಹಂಚಿಕೆ ವಿಚಾರ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೀಟು ಹಂಚಿಕೆ ಸಂಬಂಧ ಇಂದು ರಾತ್ರಿ ಅಥವಾ ನಾಳೆ ನಾನು ದೇವೇಗೌಡ ಅವರನ್ನು ಭೇಟಿ ಮಾಡುತ್ತೇನೆ, ಇದರಲ್ಲಿ ಯಾರೂ ಬೆಗ್ಗರ್ಸ್ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಂದು ಮುಖ್ಯಮಂತ್ರಿ ಜೊತೆ ಮಾತನಾಡಿದ್ದು,ಯಾವುದೇ ಗೊಂದಲವಿಲ್ಲ. ಸಿಎಂ ನನ್ನೊಂದಿಗೆ ಸೌಜನ್ಯ,ತಾಳ್ಮೆಯಿಂದಲೇ ಮಾತನಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.