ಬೆಂಗಳೂರು: ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮ್ಮ ಕೈ ಜೋಡಿಸಬಹುದು. ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ವಿರೋಧ ಪಕ್ಷಗಳ ಸಭೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡದಿರುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್ನವರು ತಮ್ಮ ನಿಲುವು ಏನು ಎಂಬುದನ್ನು ತೋರಿಸಿದ್ದಾರೆ. ಕಳೆದ ವರ್ಷವೇ ಜೆಡಿಎಸ್ನವರು ಸಾಬೀತುಪಡಿಸಿದ್ದಾರೆ. ವಿಪಕ್ಷಗಳ ಒಕ್ಕೂಟಕ್ಕೆ ನಾಯಕರು ಯಾರು ಎಂಬ ಬಗ್ಗೆ ಚಿಂತಿಸಬೇಡಿ. ದೇಶದ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ ಎಂದಿದ್ದಾರೆ.
‘ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ‘
ಇಂದು ರಾಷ್ಟ್ರೀಯ ನಾಯಕರಿಗೆ ಔತಣಕೂಟ ಇದೆ. ನಾಳೆ ಬೆಳಿಗ್ಗೆ ಅಧಿಕೃತ ಸಭೆ ಪ್ರಾರಂಭವಾಗಲಿದೆ. ಇದರಿಂದ ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ. ನಮ್ಮ ಪಟ್ನಾ ಸಭೆ ಬಳಿಕ ಪ್ರಧಾನಿಗಳಿಗೆ ಎನ್ಡಿಎ ಮೈತ್ರಿಕೂಟದ ನೆನಪಾಗಿದೆ. ಇಷ್ಟು ದಿನ ಎನ್ಡಿಎ ನೆನಪೇ ಇರಲಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಕುಟುಕಿದ್ದಾರೆ.
‘ಸೋನಿಯಾ ಗಾಂಧಿ ಭಾಗಿಯಾಗುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ‘
ಕರ್ನಾಟಕದಲ್ಲಿ ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಸರ್ಕಾರ ನಡೆಸಿದರು. ಆದರೆ, ಈಗ ಅವರ ಪರಿಸ್ಥಿತಿ ಏನಾಯ್ತು ? ಮಹಾರಾಷ್ಟ್ರದಲ್ಲೂ ಕೂಡಾ ಅದೇ ಆಗಲಿದೆ. ಸಭೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇದೊಂದು ದೊಡ್ಡ ಪ್ರಾರಂಭ. ಎಲ್ಲ ವಿರೋಧ ಪಕ್ಷಗಳು ಒಂದಾಗಿರುವುದು ಯಶಸ್ವಿ ದಿನ. ದೇಶದ ಭವಿಷ್ಯವನ್ನು ಪುನರ್ ರೂಪಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ಮಾಡಲಿದ್ದೇವೆ ಕೆಪಿಸಿಸಿ ಪರವಾಗಿ, ಸಿಎಂ ಪರವಾಗಿ ನಾವು ಎಐಸಿಸಿಗೆ ಹಾಗೂ ಎಲ್ಲ ಪಕ್ಷಗಳ ನಾಯಕರಿಗೆ ಆತಿಥ್ಯ ನೀಡುತ್ತಿದ್ದೇವೆ.ಕರ್ನಾಟಕಕ್ಕೆ ಬಹುಮತ ಸಿಕ್ಕಿದ್ದು ಇಡೀ ದೇಶಕ್ಕೆ ಹೊಸ ಸಂದೇಶ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.