ಬೆಂಗಳೂರು:‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸದ ವಿಷಯಕ್ಕೆ ಸಂಬಂಧಿಸಿದಂತೆ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅವರ ಟೀಕೆ ಬೇಸರ ತಂದಿದೆ’ ಎಂದು ಚಿಂತಕಿ ಕೆ. ನೀಲಾ ಹೇಳಿದ್ದಾರೆ.
‘ಪುಸ್ತಕ ಬಿಡುಗಡೆ ಸಮಾರಂಭ ಇದ್ದುದರಿಂದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನೀಲಾ ಮೊದಲೇ ಹೇಳಿದ್ದರು. ಆದರೆ, ಮೋಹನ ಆಳ್ವ ಮತ್ತು ರಘುಪತಿ ಭಟ್ರಂತಹ ವಚನ ತತ್ವ ವಿರೋಧಿಗಳು ಇರುವುದರಿಂದ ಪಾಲ್ಗೊಳ್ಳುವುದಿಲ್ಲ ಎಂದು ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಂಡಿದ್ದಾರೆ ಎಂದು ಸ್ವಾಮೀಜಿಗಳು ಟೀಕೆ ಮಾಡಿದ್ದಾರೆ. ಸ್ವಾಮೀಜಿಯವರ ಬಗ್ಗೆ ಗೌರವವಿದೆ. ಆದರೆ, ಅವರು ಈ ರೀತಿ ವೈಯಕ್ತಿಕ ದಾಳಿ ಮಾಡುವ ಬದಲು ತಾತ್ವಿಕ ನೆಲೆಯಲ್ಲಿ ಟೀಕೆ ಮಾಡಬಹುದಿತ್ತು’ ಎಂದು ನೀಲಾ ಹೇಳಿದ್ದಾರೆ.
‘ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ, ಆಳ್ವ ಅಥವಾ ಭಟ್ ಅತಿಥಿಗಳಾಗುವ ಬಗ್ಗೆ ಮಾಹಿತಿ ಇರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ನೋಡಿದ ನಂತರ, ನಾನು ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದೇನೆ. ತಾತ್ವಿಕ ಭಿನ್ನಾಭಿಪ್ರಾಯ ಇರುವವರ ಹೆಸರಿನೊಂದಿಗೆ ನನ್ನ ಹೆಸರು ಇರುವುದರಿಂದ ಜನರಲ್ಲಿ ದ್ವಂದ್ವ ಉಂಟಾಗಿತ್ತು. ಈ ಕಾರಣಕ್ಕೆ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.