ADVERTISEMENT

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಕೋಲಾರದ ಯುವತಿ ಅಶ್ವಿನಿ ನೇಮಕ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 20:29 IST
Last Updated 18 ಅಕ್ಟೋಬರ್ 2022, 20:29 IST
ಡಾ.ಕೆ.ಪಿ.ಅಶ್ವಿನಿ
ಡಾ.ಕೆ.ಪಿ.ಅಶ್ವಿನಿ   

ಕೋಲಾರ: ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಸ್ವತಂತ್ರ ತಜ್ಞೆಯಾಗಿ(Special Rapporteur–SR) ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ದಲಿತ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.

ಜಿನೀವಾದಲ್ಲಿ ಇದೇ 7ರಂದು ಮುಕ್ತಾಯವಾದ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಅಧಿವೇಶನದಲ್ಲಿ ಅಶ್ವಿನಿ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ಹುದ್ದೆಗೆ ಅಶ್ವಿನಿ ಸೇರಿದಂತೆ ಮೂವರ ಹೆಸರು ಕೇಳಿ ಬಂದಿದ್ದವು.

ಜಿನೆವಾದಲ್ಲಿ ನವೆಂಬರ್ 1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅಧಿಕಾರ ಅವಧಿ ಆರು ವರ್ಷ.ಈ ಹುದ್ದೆಗೆ ನೇಮಕವಾದ ಏಷ್ಯಾ ಮತ್ತು ಭಾರತದ ಮೊದಲವ್ಯಕ್ತಿಯಾಗಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿಯ ವರ್ಣಭೇದ ನೀತಿ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾ(ವಿದೇಶಿಯರ ಬಗ್ಗೆ ಭಯ),ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ಇವರು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಬಗ್ಗೆ ಮಂಡಳಿಗೆ ಕಾಲಕಾಲಕ್ಕೆ ವರದಿ ಹಾಗೂ ಸಲಹೆ ನೀಡಲಿದ್ದಾರೆ.

ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿ ಪುತ್ರಿಯಾಗಿರುವ ಅಶ್ವಿನಿ ಅವರು ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಿಂದ ಎಂ.ಫಿಲ್., ಪಿಎಚ್.ಡಿ ಪದವಿ ಪಡೆದಿದ್ದಾರೆ.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕಿಯಾಗಿ, ಸೇಂಟ್‌ ಜೋಸೆಫ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದರು.

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳಆದಿವಾಸಿಗಳ ಮೇಲೆ ಅಲ್ಲಿಯ ಗಣಿಗಾರಿಕೆಯಿಂದ ಆದ ಪರಿಣಾಮಗಳ ಬಗ್ಗೆ ವಿಶೇಷ ಆಧ್ಯಯನ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.