ADVERTISEMENT

ಜ್ಯುಬಿಲೆಂಟ್ ವಿರುದ್ಧ ಕ್ರಮ: ಸಚಿವ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 21:30 IST
Last Updated 28 ಏಪ್ರಿಲ್ 2021, 21:30 IST
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್   

ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದು ಪೂರೈಸುವಂತೆ ಸೂಚಿಸಿದರೂ ಒಂದೇ ಔಷಧ ನೀಡದ ಜ್ಯುಬಿಲೆಂಟ್ ಕಂಪನಿ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಇಡೀ ದೇಶದಲ್ಲಿ ಎಂಟು ಕಂಪನಿಗಳು ರೆಮ್‌ಡಿಸಿವಿರ್ ತಯಾರಿಸುತ್ತವೆ. ರಾಜ್ಯಕ್ಕೆ ಬೇಕಾದ ಚುಚ್ಚುಮದ್ದು ಪೂರೈಸುವಂತೆ ಸೂಚಿಸಿದ್ದರೂ ಜ್ಯುಬಿಲೆಂಟ್‌ ಸ್ಪಂದಿಸಿಲ್ಲ’ ಎಂದರು.

‘ಕೇಂದ್ರ ಸರ್ಕಾರ ರಾಜ್ಯಕ್ಕೆ 1.22 ಲಕ್ಷ ವಯಲ್‌ಗಳನ್ನು ಹಂಚಿಕೆ ಮಾಡಿದೆ. ರಾಜ್ಯದಲ್ಲಿ 3 ಲಕ್ಷ ಕೋವಿಡ್‌ ರೋಗಿಗಳಿದ್ದಾರೆ. ಕೆಲ ಸೋಂಕಿತರು ಯಾವುದೇ ವೈದ್ಯಕೀಯ ಮಾರ್ಗದರ್ಶನ ಇಲ್ಲದೆ ಮನೆಯಲ್ಲೇ ರೆಮ್‌ ಡಿಸಿವಿರ್ ಪಡೆಯುತ್ತಿರುವುದು ಗೊತ್ತಾಗಿದೆ. ಮನೆಯಲ್ಲಿ ದಾಸ್ತಾನು ಮಾಡುವುದು, ವೈದ್ಯರಿಂದ ಬರೆಸಿಕೊಂಡು ಔಷಧ ಪಡೆಯುವುದನ್ನು ಸಾರ್ವಜನಿಕರು ಮಾಡಬಾರದು. ವೈದ್ಯರು ಕೂಡ ಈ ರೀತಿ ಔಷಧಿ ಬರೆದು ಕೊಡಬಾರದು. ಅಗತ್ಯ ಇರುವವರಿಗೆ ಮಾತ್ರ ನೀಡಬೇಕು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಹೆಚ್ಚುವರಿಯಾಗಿ 1.80 ಲಕ್ಷ ವಯಲ್ ರೆಮ್‌ಡಿಸಿವಿರ್ ಪೂರೈಕೆಗೆ ಆದೇಶಿಸಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.