ADVERTISEMENT

ವಿದೇಶ ಪ್ರವಾಸ ಹೋಗುವುದಿಲ್ಲ: ಸಚಿವ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 16:20 IST
Last Updated 12 ಫೆಬ್ರುವರಿ 2026, 16:20 IST
ಕೆ.ವೆಂಕಟೇಶ್
ಕೆ.ವೆಂಕಟೇಶ್   

ಬೆಂಗಳೂರು: ‘ನಾನು ವಿದೇಶ ಪ್ರವಾಸ ಹೋಗುವುದಿಲ್ಲ. ಇಲಾಖೆ ಕಡೆಯಿಂದಲೂ ಶಾಸಕರನ್ನು ಪ್ರವಾಸಕ್ಕೆ ಕಳುಹಿಸುವುದಿಲ್ಲ’ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಮ್ಮ ಇಲಾಖೆ ಹೆಸರು ಏಕೆ ಬಂತೊ ಗೊತ್ತಿಲ್ಲ’ ಎಂದರು.

‘ಪ್ರವಾಸ ಹೋಗಲು ಎನ್‌ಒಸಿಗೆ (ನಿರಾಕ್ಷೇಪಣೆ) ಪತ್ರ ಬರೆದಾಗ ನನ್ನ ಹೆಸರೂ ಇತ್ತು. ಆದರೆ, ನಾನು ಹೋಗುವುದಿಲ್ಲ. ನಾನು 30 ವರ್ಷದಿಂದ ಮುಖ್ಯಮಂತ್ರಿ ಜೊತೆಗೆ ಇದ್ದೇನೆ. ಅವರೊಂದಿಗೆ ಇರುವ ಒಡನಾಟವನ್ನು ಹೀಗೆ ಪ್ರಶ್ನೆ ಮಾಡಿದರೆ, ವ್ಯಾಖ್ಯಾನಿಸಿದರೆ ಏನು ಹೇಳಲಿ? ಪ್ರವಾಸದ ಬಗ್ಗೆ ನನ್ನಿಂದ ವರಿಷ್ಠರು ಮಾಹಿತಿ ಕೇಳಿಲ್ಲ’ ಎಂದರು.

ADVERTISEMENT

‘ಅಧಿವೇಶನದ ಸಂದರ್ಭದಲ್ಲಿ ವಿದೇಶ ಪ್ರವಾಸದ ಚರ್ಚೆ ನಡೆಯಿತು. ನೀವೂ ಬನ್ನಿ, ನೀವೂ ಬನ್ನಿ ಎಂದು ಕೆಲವು ಸ್ನೇಹಿತರು ಹೇಳಿದರು. ಆಯಿತು ನೋಡೋಣ ಎಂದಿದ್ದೆ. ಆದರೆ, ಇಲಾಖೆಯಿಂದ ಕಳುಹಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕೆಲವು ಸ್ನೇಹಿತರು ಅವರವರ ಖರ್ಚಿನಲ್ಲಿ ಹೋಗುತ್ತಿದ್ದಾರೆ. ಅದನ್ನು ಬಹಿರಂಗವಾಗಿ ಅವರು ಹೇಳಬೇಕು’ ಎಂದರು.

‘ಪ್ರವಾಸಕ್ಕೆ ಕಳುಹಿಸುವಷ್ಟು ದುಡ್ಡು ನಮ್ಮ ಇಲಾಖೆಯಲ್ಲಿ ಇಲ್ಲ. ಶಾಸಕರು ತಮ್ಮ ಖರ್ಚಿನಲ್ಲಿ ವಿದೇಶ ಪ್ರವಾಸ ಹೋಗುವುದಕ್ಕೆ ಯಾಕೆ ಭಯ ಪಡುತ್ತಿದ್ದಾರೆಂದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಬಣ, ಮುಖ್ಯಮಂತ್ರಿ ಬಣ ಎಂದು ಯಾಕೆ ಚರ್ಚೆ ಮಾಡಬೇಕು? ನಾಯಕತ್ವ ವಿಚಾರಕ್ಕೂ ಇದಕ್ಕೂ ಏನು ಸಂಬಂಧ? ಕೆಲವರು ಅನುಮತಿ ಕೋರಿ ಪತ್ರ ಬರೆದಿದ್ದು ಹೌದು. ಸ್ನೇಹಿತರ ವಲಯದಲ್ಲಿ ಚರ್ಚೆ ಆಗಿದ್ದೂ ನಿಜ. ಆದರೆ, ಇಲಾಖೆಯಿಂದ ಕಳುಹಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.