ಬೆಂಗಳೂರು: ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲ್ಲೂಕಿನ ವಿರಕ್ತ ಮಠದ ಪೀಠಾಧ್ಯಕ್ಷ ಬಸವಲಿಂಗ ಮಹಾಸ್ವಾಮಿ, ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ಶಂಕರಪ್ಪ ಹಾಗೂ ಕೊಪ್ಪಳದ ರಂಗನಿರ್ದೇಶಕ ಹಾಗೂ ಕಲಾವಿದ ಇಮಾಮಸಾಬ ಅವರು 2021ನೇ ಸಾಲಿನ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ಈ ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿರಲಿದೆ.
‘ಬಸವಲಿಂಗ ಮಹಾಸ್ವಾಮಿಯವರು ‘ಗಡಿನಾಡು ಶರಣ ಸಾಹಿತ್ಯ’ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿದ್ದಾರೆ. ಶಂಕರಪ್ಪನವರಿಗೆ 2011 ಮತ್ತು 2017ನೇ ಸಾಲಿನ ಬಾಂಬೆ ಕುಲಾಲ ಸಂಘದ ಉತ್ತಮ ಲೇಖಕ ಪ್ರಶಸ್ತಿ ದೊರೆತಿದೆ. ಇವರು 2019ರ ಮುಳಬಾಗಿಲು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಮಾಮಸಾಬ ಅವರು ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಪ್ರಮೀಳಾದೇವಿ, ಗಿರಿಜಾ ಕಲ್ಯಾಣ, ದಕ್ಷಬ್ರಹ್ಮ ಸೇರಿದಂತೆ ಒಟ್ಟು 225 ಅಧಿಕ ದೊಡ್ಡಾಟಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 250ಕ್ಕೂ ಹೆಚ್ಚು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.