ಬೆಂಗಳೂರು: ‘ಕನ್ನಡ ನಾಡಿನ ಒಂದಿಚು ನೆಲವನ್ನಾಗಲಿ, ಒಂದು ಹನಿ ನೀರನ್ನಾಗಲಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಗಡಿ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು,‘ಶೀಘ್ರದಲ್ಲಿಯೇ ಬೆಳಗಾವಿಗೆ ಭೇಟಿ ನೀಡಿ, ಹೋರಾಟಗಾರರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಇದೆ ಎನ್ನುವುದನ್ನು ತಿಳಿಸಲಾಗುವುದು. ಗಡಿ ವಿವಾದವು ಮುಗಿದು ಹೋದ ಅಧ್ಯಾಯವಾಗಿದ್ದು, ಇದನ್ನು ಪದೇ ಪದೇ ಕೆದಕುವುದರಿಂದ ಎರಡೂ ರಾಜ್ಯಗಳ ಶಾಂತಿ ಕದಡುತ್ತದೆ. ಶಾಂತಿ ಪ್ರಿಯರಾದ ಕನ್ನಡಿಗರು ತಾವಾಗಿಯೇ ಎಂದಿಗೂ ಜಗಳಕ್ಕೆ ಹೋಗುವವರಲ್ಲ. ಆದರೆ, ತಮ್ಮ ಮೇಲೆ ಆಕ್ರಮಣ ನಡೆದರೆ ರಕ್ಷಿಸಿ ಕೊಳ್ಳುವ, ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
‘ನ್ಯಾಯಾಲಯದ ತೀರ್ಮಾನಗಳು ನಿಷ್ಪಕ್ಷಪಾತವಾಗಿ ನಡೆಯಲು ಎಲ್ಲರೂ ಅದಕ್ಕೆ ಬದ್ದವಾಗಿರಬೇಕು. ಆದರೆ, ವಿವಾದವು ನ್ಯಾಯಾಲಯದಲ್ಲಿ ಇರುವಾಗ ನಡೆಯುವ ಇಂತಹ ಘಟನೆಗಳು ಖಂಡನೀಯ. ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ನಡುವೆ ಅವಿನಾಭಾವ ಸಂಬಂಧ ಬಹುಕಾಲದಿಂದಲೂ ಇದ್ದು, ಕೆಲವೇ ಕೆಲವು ಕಿಡಿಗೇಡಿಗಳಿಂದ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಎರಡೂ ರಾಜ್ಯದವರು ಇದನ್ನು ನಿರ್ಲಕ್ಷಿಸಿ, ಸೌಹಾರ್ದಯುತ ನಡವಳಿಕೆಯನ್ನು ಮುಂದುವರೆಸಬೇಕು’ ಎಂದು ತಿಳಿಸಿದ್ದಾರೆ.
‘ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ವಿವಾದದ ಕುರಿತು ಗೋಷ್ಠಿಯೊಂದನ್ನು ನಡೆಸಿ, ಚಿಂತನ ಮಂಥನಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಪರವಾಗಿ ಪರಿಷತ್ತು ಸದಾ ಮಿಡಿಯುತ್ತದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.