ADVERTISEMENT

ಕಸಾಪ: ಸಕಾಲಕ್ಕೆ ಚುನಾವಣೆ ನಡೆಸಿ

ಸಾಹಿತಿ–ಚಿಂತಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 21:20 IST
Last Updated 24 ಸೆಪ್ಟೆಂಬರ್ 2020, 21:20 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರುಐದು ವರ್ಷದ ಅಧಿಕಾರಾವಧಿ ಮುಕ್ತಾಯವಾದ ಬಳಿಕ ಗೌರವಯುತವಾಗಿ ನಿರ್ಗಮಿಸಿ,ಮುಂಬರುವ ಮಾರ್ಚ್‌ಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸಾಹಿತಿಗಳು ಹಾಗೂ ಚಿಂತಕರುಆಗ್ರಹಿಸಿದ್ದಾರೆ.

ಪರಿಷತ್ತಿನ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ವಿಸ್ತರಣೆ‌ ನಿರ್ಣಯ ವಿರೋಧಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಕೆಲ ದಿನಗಳ ಹಿಂದಷ್ಟೇ ಅರ್ಜಿದಾರರು ಹಿಂಪಡೆದಿದ್ದಾರೆ. ಇದರಿಂದಾಗಿ ಅಧ್ಯಕ್ಷರ ಚುನಾವಣೆಗೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ ಎಂದು ಅವರು ‍ಪ್ರತಿಪಾದಿಸಿದ್ದಾರೆ.

ಚುನಾವಣೆ ನಡೆಸಲು ಈಗಿನ ಕಾರ್ಯಕಾರಿ ಸಮಿತಿ ಕೂಡಲೇ ನಿರ್ಣಯ ಕೈಗೊಳ್ಳಬೇಕು ಎಂದು ಜಿ.ಕೆ. ಗೋವಿಂದರಾವ್, ಕೆ. ಮರುಳಸಿದ್ದಪ್ಪ, ವಿಜಯಾ, ಬಿ.ಟಿ. ಲಲಿತಾ ನಾಯಕ್, ಎಲ್. ಹನುಮಂತಯ್ಯ, ಎಸ್.ಜಿ. ಸಿದ್ಧರಾಮಯ್ಯ, ಬಿ.ಎಲ್. ವೇಣು, ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಕೆ.ಎಸ್. ಭಗವಾನ್, ಎಚ್.ಎಸ್. ಶಿವಪ್ರಕಾಶ್, ಎಂ.ಜಿ. ಈಶ್ವರಪ್ಪ, ಪುರುಷೋತ್ತಮ ಬಿಳಿಮಲೆ, ಆರ್.ಕೆ. ಹುಡಗಿ, ಚಂದ್ರಶೇಖರ ತಾಳ್ಯ, ಮೀನಾಕ್ಷಿ ಬಾಳಿ, ಕೆ. ನೀಲಾ, ಬಂಜಗೆರೆ ಜಯಪ್ರಕಾಶ, ಸಂಧ್ಯಾ ರೆಡ್ಡಿ, ಅರವಿಂದ ಮಾಲಗತ್ತಿ, ಚಂದ್ರಶೇಖರ ನಂಗಲಿ, ನಟರಾಜ ಬೂದಾಳ್, ಆರ್.ಜಿ. ಹಳ್ಳಿ ನಾಗರಾಜ, ಮಲ್ಲಿಕಾರ್ಜುನ ಕಲಮರಹಳ್ಳಿ, ಎಚ್.ಆರ್. ಸ್ವಾಮಿ ಹಾಗೂ ಎಂ.ಜಿ‌. ಚಂದ್ರಶೇಖರಯ್ಯಒತ್ತಾಯಿಸಿದ್ದಾರೆ.

ADVERTISEMENT

‘ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮೂರು ವರ್ಷಗಳ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಿಕೊಂಡು, ಅದನ್ನೂ ಪೂರೈಸಿದ್ದಾರೆ. ಪರಿಷತ್ತಿನ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಇಟ್ಟುಕೊಂಡ ಯಾರೇ ಆಗಲಿ, ತಮ್ಮ ಈಗಿನ ಅಧಿಕಾರಾವಧಿಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು.ಹಲವು ಧ್ಯೇಯೋದ್ದೇಶ ಇಟ್ಟುಕೊಂಡು ಪರಿಷತ್ತನ್ನು ಆರಂಭಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯಬಾರದು’ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.