ADVERTISEMENT

‘ವಿದ್ವತ್‌ ಪರಂಪರೆಯ ಕೊನೆಯ ಕೊಂಡಿ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:27 IST
Last Updated 21 ಏಪ್ರಿಲ್ 2021, 16:27 IST
ಕಾರ್ಯಕ್ರಮದಲ್ಲಿ ವೆಂಕಟಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. (ಎಡದಿಂದ) ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಮಲ್ಲೇಪುರಂ ಜಿ.ವೆಂಕಟೇಶ್‌, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ರಾಜಕುಮಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವೆಂಕಟಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. (ಎಡದಿಂದ) ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಮಲ್ಲೇಪುರಂ ಜಿ.ವೆಂಕಟೇಶ್‌, ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ರಾಜಕುಮಾರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇತ್ತೀಚೆಗೆ ನಿಧನರಾದ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರು ವಿದ್ವತ್‌ ಪರಂಪರೆಯ ಕೊನೆಯ ಕೊಂಡಿಯಾಗಿದ್ದರು. ಅವರು ಹಸ್ತಪ್ರತಿಗಳನ್ನು ತಿದ್ದಿ, ತೀಡಿ ಶ್ರದ್ಧೆಯಿಂದ ಮುದ್ರಣಪ್ರತಿ ಸಿದ್ಧಪಡಿಸುತ್ತಿದ್ದರು. ಅವರ ವ್ಯಕ್ತಿತ್ವ ಮತ್ತು ವಿದ್ವತ್‌, ಆಳ ಮತ್ತು ವಿಸ್ತಾರದಿಂದ ಕೂಡಿತ್ತು’ ಎಂದು ಹಿರಿಯ ಸಂಶೋಧಕ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪ‍ತಿ ಮಲ್ಲೇಪುರಂ ಜಿ.ವೆಂಕಟೇಶ್‌ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಬುಧವಾರ ಆಯೋಜಿಸಿದ್ದ ವೆಂಕಟಸುಬ್ಬಯ್ಯನವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ‘ಜೀವಿ’ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ‘ವೆಂಕಟಸುಬ್ಬಯ್ಯನವರು ಅರವತ್ತರ ದಶಕದಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಆಗ ಸರ್ಕಾರದಿಂದ ₹3 ಸಾವಿರ ವಾರ್ಷಿಕ ಅನುದಾನ ಬರುತ್ತಿತ್ತು. ಈ ಸಂಬಂಧ ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಿದ್ದ ‘ಜೀವಿ’ ಈ ಮೊತ್ತ ₹25 ಸಾವಿರಕ್ಕೆ ಹೆಚ್ಚಿಸುವಂತೆ ಅವರ ಮನವೊಲಿಸಿದ್ದರು. ಪರಿಷತ್ತನ್ನು ಭಾರತದ ಮುಂಚೂಣಿ ವಿದ್ವತ್‌ ಸಂಸ್ಥೆಗಳ ಸಾಲಿನಲ್ಲಿ ತಂದು ನಿಲ್ಲಿಸಿದ ಹಿರಿಮೆಯೂ ಅವರಿಗೆ ಸಲ್ಲಬೇಕು’ ಎಂದರು.

ADVERTISEMENT

‘ಜೀವಿ ಅವರು ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ, ಅನಂತರ ‘ಕನ್ನಡ–ಕನ್ನಡ’ ಬೃಹತ್‌ ನಿಘಂಟಿನ ಪ್ರಧಾನ ಸಂಪಾದಕರಾಗಿ ನಾಲ್ಕು ದಶಕಗಳ ಕಾಲ ದಣಿವರಿಯದೆ ದುಡಿದಿದ್ದರು. ಅವರ ಪರಿಶ್ರಮದಿಂದಾಗಿ ಭಾರತೀಯ ಭಾಷೆಗಳಲ್ಲೇ ಅತ್ಯಂತ ಅಪರೂಪ ಹಾಗೂ ಅನನ್ಯವಾದ ನಿಘಂಟು ದಕ್ಕಿತು. ಆ ಮೂಲಕ ಕನ್ನಡಕ್ಕೆ ಭಾರತದಲ್ಲಿ ಅಸ್ಮಿತೆ ತಂದುಕೊಟ್ಟಿತು’ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.