ಬಳ್ಳಾರಿ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ(ಕೆಆರ್ಪಿಪಿ) ವೇದಿಕೆಯಲ್ಲಿ ಮೊದಲ ಸಲ ಕಾಣಿಸಿಕೊಂಡ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಪುತ್ರಿ ಬ್ರಾಹ್ಮಿಣಿ, ‘ನನ್ನಪ್ಪ ಒಂಟಿ ಅಲ್ಲ; ನಾವೆಲ್ಲರೂ ಅವರ ಜತೆಗಿದ್ದೇವೆ’ ಎಂದು ಘೋಷಿಸಿ ಬಳ್ಳಾರಿ ಜಿಲ್ಲೆಯ ರಾಜಕಾರಣಕ್ಕೆ ರಂಗೇರಿಸುವ ಪ್ರಯತ್ನ ಮಾಡಿದರು.
ಜನಾರ್ದನ ರೆಡ್ಡಿ ಗೈರು ಹಾಜರಿಯಲ್ಲಿ ಅವರ ಪತ್ನಿ ಲಕ್ಷ್ಮಿ ಅರುಣಾ ನೇತೃತ್ವದಲ್ಲಿ ಹವಂಬಾವಿ ಹೆಲಿಪ್ಯಾಡ್ನಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜನ್ಮಭೂಮಿ, ಕರ್ಮ ಭೂಮಿ, ಪುಣ್ಯ ಭೂಮಿಯಿಂದ ದೂರ ಆಗಬೇಕಾದ ಪರಿಸ್ಥಿತಿ ಬೇರೆ ಯಾರಿಗೂ ಬಾರದಿರಲಿ. ರೆಡ್ಡಿ ಸಚಿವರಾಗಿ ಮಾಡಿದ ಕೆಲಸ ಸ್ಮರಣೀಯ. ಆನಂತರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಚಾಗನೂರು ವಿಮಾನ ನಿಲ್ದಾಣ ತನ್ನ ತಂದೆ ಕನಸು. ಅದು ನನೆಗುದಿಗೆ ಬಿದ್ದಿದೆ’ ಎಂದೂ ಬ್ರಾಹ್ಮಿಣಿ ಹೇಳಿದರು.
ಲಕ್ಷ್ಮಿ ಅರುಣಾ ಅವರು ಮಾತನಾಡಿ, ‘ರೆಡ್ಡಿ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಅವರನ್ನು ಬಳ್ಳಾರಿಗೆ
ಬರದಂತೆ ಜೈಲಿಗೆ ಕಳುಹಿಸಲಾಗಿತ್ತು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಮತ್ತೊಮ್ಮೆ ರಾಜಕೀಯಕ್ಕೆ ಬರಬೇಕಿದೆ’ ಎಂದು ಹೇಳಿದರು.
ವಿಡಿಯೊ ಮೂಲಕ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಬೆಂಗಳೂರು ಮಹಾನಗರದ ನಂತರ ಎರಡನೇ ಮಹಾನಗರವಾಗಿ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಕನಸು ತಮಗಿದೆ ಎಂದು ತಿಳಿಸಿದರು.
ಕಲ್ಯಾಣ ಸ್ವಾಮೀಜಿ, ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ, ಮಹಾಂತ ಸ್ವಾಮೀಜಿ ಮತ್ತಿತರ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಜನಾರ್ದನ ರೆಡ್ಡಿ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ 56 ಕಿಲೋ ಗ್ರಾಂ ಕೇಕ್ ಕತ್ತರಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಇದಕ್ಕೂ ಮೊದಲು ಬೈಕ್ ರ್ಯಾಲಿ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.