ADVERTISEMENT

ಒಳನೋಟ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 11:31 IST
Last Updated 31 ಜುಲೈ 2022, 11:31 IST
ಅಶೋಕ ಚಂದರಗಿ
ಅಶೋಕ ಚಂದರಗಿ   

‘ಗಡಿ ಗ್ರಾಮ: ಸಿಗದ ಪರಿಹಾರ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜುಲೈ 31) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

‘ಗಡಿಭಾಗದ ಸಮಸ್ಯೆಗಳಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ’

ADVERTISEMENT

ಗಡಿ ಭಾಗದ ಸಮಸ್ಯೆಗಳು, ಪ್ರಾದೇಶಿಕ ಭಾಷೆಯ ಕಲಿಕೆಯ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಗಡಿ ಹಿತಾಸಕ್ತಿ ಕಾಪಾಡಲು ಹಾಗೂ ಕನ್ನಡವನ್ನು ಉಳಿಸಿ ಬೆಳೆಸಲು ರಚನೆಯಾಗಿರುವ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಿಗೆ ಬಲ ತುಂಬುವ ಕೆಲಸವಾಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡಿಯ ಹಿತಾಸಕ್ತಿಗಾಗಿ ಹೆಚ್ಚಿನ ಅನುದಾನ ಮಂಜೂರು ಮಾಡಿದರೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಕೊಕ್ಕೆ ಹಾಕುತ್ತಿರುವುದನ್ನು ಗಮನಿಸಿದರೆ ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವಂತಾಗಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 66 ವರ್ಷಗಳಾದರೂ ಗಡಿ ಭಾಗದಲ್ಲಿ ಸಮಸ್ಯೆಗಳು ಜೀವಂತವಾಗಿರುವುಕ್ಕೆ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ.

-ಅಶೋಕ ಚಂದರಗಿ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

***

ಮೂಲ ಸೌಕರ್ಯಗಳನ್ನು ಸುಧಾರಿಸಲಿ

ರಾಜ್ಯದ ಗಡಿ ಭಾಗದಲ್ಲಿರುವ ಕನ್ನಡಿಗರ ಮತ್ತು ಕನ್ನಡದ ಅಸ್ಮಿತೆಯನ್ನು ಉಳಿಸಬೇಕು. ಕುಡಿಯುವ ನೀರು, ಸಾರಿಗೆ ಅವ್ಯವಸ್ಥೆ ಸುಧಾರಿಸಬೇಕು. ಉದ್ಯೋಗವಿಲ್ಲದಿರುವುದರಿಂದ ವಲಸೆ ಅನಿವಾರ್ಯವಾಗಿದೆ. ಈ ಭಾಗದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆರ್ಥಿಕವಾಗಿ ಅಭಿವೃದ್ಧಿಗೊಳಿಸಬೇಕು. ಕನ್ನಡ ಶಾಲೆಗಳು, ಶಿಕ್ಷಕರ ಸಮಸ್ಯೆ, ಭಾಷೆಯ ತಾರತಮ್ಯ ನೀತಿಗಳಿಂದ ಬದುಕು ಅಸ್ತವ್ಯಸ್ತಗೊಂಡಿದೆ. ಪ್ರತಿದಿನವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಡಿ ಭಾಗದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

-ರವಿಕುಮಾರ ಜಾಧವ (ಸೋನೆ), ಕನ್ನಡ ವಿಶ್ವವಿದ್ಯಾಲಯ ಹಂಪಿ

***

‘ಸಾರಿಗೆ ಸೌಲಭ್ಯ ಕಲ್ಪಿಸಿ’

ಗಡಿ ಭಾಗದಲ್ಲಿರುವ ರಾಜ್ಯದ ಬಹುತೇಕ ಹಳ್ಳಿಗಳಿಗೆ ಬಸ್ ಸೌಲಭ್ಯವಿಲ್ಲ. ಉತ್ತರ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಯ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ಖಾಸಗಿ ವಾಹನ ಅನಿವಾರ್ಯ. ಲಂಬಾಣಿ ಜನಾಂಗದ ತಾಂಡಾಗಳಿಗೆ ಸಾರಿಗೆ ಸಂಪರ್ಕವೇ ಇಲ್ಲ. ಇಲ್ಲಿನ ಬಹುತೇಕ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ನಡೆದುಕೊಂಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಕೂಡಲೇ ಈ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿಬೇಕು.

–ಮಹಾದೇವಿ ಬಿರಾದಾರ, ಇಳಕಲ್

***

‘ಗಡಿ ಗ್ರಾಮ:ಸಿಗದ ಪರಿಹಾರ’

ಗಡಿಗ್ರಾಮ ಎಂದಾಗ ಐದು ರಾಜ್ಯಗಳ ಗಡಿ ಪ್ರದೇಶಗಳನ್ನು ಹೊಂದಿರುವ ಬೀದರ ಜಿಲ್ಲೆಯ ಪರಿಸ್ಥಿತಿ ಒಂದು ಕಡೆಯಾದರೆ ಕರ್ನಾಟಕದ ಬೆಳಗಾವಿ ಜಿಲ್ಲೆ , ರಾಯಚೂರು, ಕಲಬುರ್ಗಿ, ಜಿಲ್ಲೆಗಳ ಗಡಿ ಗ್ರಾಮಗಳಲ್ಲಿ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರಿಯಾದ ರಸ್ತೆ ಸೌಲಭ್ಯ, ಸಾರಿಗೆ ವ್ಯವಸ್ಥೆ, ನೀರಾವರಿ ಯೋಜನೆಗಳಿಗೆ ಸಿಗದ ಪರಿಹಾರ ಒದಗಿಸುವ ಕೆಲಸವಾಗಬೇಕು.

-ನಂದೀಶ ಮ ಕರಾಳೆ, ಮೂಡಲಗಿ

***

‘ಮೂಲ ಸೌಕರ್ಯ ಒದಗಿಸಿ’

ಗಡಿ ಭಾಗದ ಜನರು ರಾಜ್ಯದ ಬೇರೆ ಭಾಗದ ಜನರಿಗೆ ಸಿಗುವ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಾರಿಗೆ ವ್ಯವಸ್ಥೆ, ಶಿಕ್ಷಣ, ಭಾಷೆಯ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

-ಚೈತ್ರ .ವಿ.ವೈ., ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.