ಬೆಂಗಳೂರು: ಸಚಿವ ಸ್ಥಾನ ಸಿಗದೇ ನಿರಾಸೆಗೊಂಡ ಮುನಿರತ್ನ ಸೇರಿ ಕೆಲವು ಶಾಸಕರು ಪಕ್ಷದ ಉಸ್ತುವಾರಿ ಅರುಣ್ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬುಧವಾರ ಸಚಿವ ಸಂಪುಟ ವಿಸ್ತರಣೆ ಬಳಿಕ ಅರುಣ್ ಸಿಂಗ್ ಅವರನ್ನು ಭೇಟಿಯಾದ ಅತೃಪ್ತರು ತಮ್ಮ ಅಸಮಾಧಾನ ತೋಡಿಕೊಂಡರು ಎಂದು ಹೇಳಲಾಗಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ನಾಗೇಶ್ ಕೂಡ ಕುಮಾರಕೃಪಾದಲ್ಲಿ ಸಿಂಗ್ ಅವರನ್ನು ಭೇಟಿ ಮಾಡಿದರು. ಸಚಿವ ಸ್ಥಾನ ಪಡೆದ ಮುರುಗೇಶ ನಿರಾಣಿ ಅವರೂ ಭೇಟಿ ಮಾಡಿ ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೂ ಇದ್ದರು ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಅರುಣ್ಸಿಂಗ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆಗೆ ಮಾತುಕತೆ ನಡೆಸಿ, ಪಕ್ಷದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಕ್ಷದಲ್ಲಿ ಎಲ್ಲ ಶಾಸಕರೂ ಸಚಿವರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಸುಧಾಕರ್ ಜತೆ ಪ್ರತ್ಯೇಕ ಸಭೆ: ಅರುಣ್ ಸಿಂಗ್ ಅವರು ಸುಧಾಕರ್ ಜತೆ ಸುಮಾರು 35 ನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿದರು.
ಪಕ್ಷದ ಸಂಘಟನೆ, ಸಂಪುಟ ವಿಸ್ತರಣೆ ಕುರಿತು ಎದ್ದಿರುವ ಅಸಮಾ ಧಾನಗಳ ಬಗ್ಗೆಯೂ ಅವರು ಮಾಹಿತಿ ಗಳನ್ನು ಪಡೆದರು ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.