ADVERTISEMENT

ಯತೀಂದ್ರ ಅವರದ್ದು ಎಳಸು ಹೇಳಿಕೆ, ಇತಿಮಿತಿ ಅರಿತು ಮಾತನಾಡಲಿ: ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 12:32 IST
Last Updated 23 ಅಕ್ಟೋಬರ್ 2025, 12:32 IST
<div class="paragraphs"><p>ಇಕ್ಬಾಲ್ ಹುಸೇನ್ ಮತ್ತು&nbsp;ಯತೀಂದ್ರ ಸಿದ್ದರಾಮಯ್ಯ</p></div>

ಇಕ್ಬಾಲ್ ಹುಸೇನ್ ಮತ್ತು ಯತೀಂದ್ರ ಸಿದ್ದರಾಮಯ್ಯ

   

ರಾಮನಗರ: ‘ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಗ್ರಾಸವಾಗಿರುವ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಎಳಸುತನದಿಂದ ಕೂಡಿದೆ. ಅವರ ಮಾತಿನ್ನೂ ಬಲಿತಿಲ್ಲ. ಜೊತೆಗೆ ಶಕ್ತಿಯೂ ಇಲ್ಲ. ಅವರು ವಿಧಾನ ಪರಿಷತ್ ಸದಸ್ಯರೇ ಹೊರತು ವಿಧಾನಸಭಾ ಸದಸ್ಯರಲ್ಲ. ಅವರು ತಮ್ಮ ಇತಿ ಮಿತಿಗಳನ್ನು ಅರಿತು ಗೌರವಯುತ ಹೇಳಿಕೆ ನೀಡಬೇಕು. ಸಿ.ಎಂ ಬದಲಾವಣೆ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸಬಾರದು...’

– ‘ನಮ್ಮ ತಂದೆ ರಾಜಕೀಯ ಸಂಧ್ಯಾಕಾಲದಲ್ಲಿದ್ದು, ಪ್ರಗತಿಪರ ಚಿಂತನೆ ಹೊಂದಿರುವವರಿಗೆ ಸೈದ್ದಾಂತಿಕ ಮಾರ್ಗದರ್ಶನ ನೀಡಿ ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ. ಸಚಿವ ಸತೀಶ ಜಾರಕಿಹೊಳಿ ಆ ಜವಾಬ್ದಾರಿ ತೆಗೆದುಕೊಳ್ಳಲು ಸಮರ್ಥರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಾಲ್ಲೂಕಿನ ಅಂಕನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ನೀಡಿದ ಪ್ರತಿಕ್ರಿಯೆ ಇದು.

ADVERTISEMENT

‘ಸಿ.ಎಂ ಬದಲಾವಣೆ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಡುತ್ತಾರೆ. ಅಂದರೆ ನಾವು ಮಾಡಿದ್ರೆ ಬಲಾತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ. ದೊಡ್ಡ ಮನೆತನದ ದೊಡ್ಡ ಸ್ಥಾನದಲ್ಲಿರುವ ಯತೀಂದ್ರ ಅವರು, ತಾವಾಗೇ ಕೆಳಗಡೆ ಬೀಳೋದು ನಮಗಿಷ್ಟವಿಲ್ಲ. ಅವರು ಈ ರೀತಿ ಹೇಳಿಕೆಗಳನ್ನು ನೀಡದೆ ತಿದ್ದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. 2028ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಯುವ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ಬಂದಿರುವ ಶಿವಕುಮಾರ್ ಅವರು ಸಮರ್ಥ ನಾಯಕ. ಪಕ್ಷ ಸಂಘಟನೆಗೆ ಹೆಚ್ಚಿನ ಶ್ರಮ ಹಾಕುತ್ತಾ, ನಮಗೆಲ್ಲಾ ಶಕ್ತಿ ತುಂಬುತ್ತಿದ್ದಾರೆ. ಹೀಗಿರುವಾಗ ಸಿ.ಎಂ ಬದಲಾವಣೆ ವಿಷಯದಲ್ಲಿ ಯಾರೂ ಗೊಂದಲದ ಹೇಳಿಕೆ ನೀಡಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.