ADVERTISEMENT

ವಿಜಯವಾಡಕ್ಕೆ ಸಿ.ಎಂ. ಕುಮಾರಸ್ವಾಮಿ ಭೇಟಿ: ನಿಖಿಲ್‌ ಮದುವೆ ಮಾತುಕತೆ ವದಂತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 16:23 IST
Last Updated 31 ಆಗಸ್ಟ್ 2018, 16:23 IST
ನಿಖಿಲ್‌ ಗೌಡ
ನಿಖಿಲ್‌ ಗೌಡ   

ಹೈದರಾಬಾದ್‌: ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಂಧ್ರ ಪ್ರದೇಶದ ವಿಜಯವಾಡಕ್ಕೆ ಶುಕ್ರವಾರ ನೀಡಿದ ಭೇಟಿಯ ಹಿಂದೆ ರಾಜಕೀಯದ ಜತೆಗೆ ಕುಟುಂಬ ಕಾರ್ಯವೂ ಸೇರಿಕೊಂಡಿತ್ತು ಎಂದು ಹೇಳಲಾಗಿದೆ. ‘ಜಾಗ್ವಾರ್‌’ ಸಿನಿಮಾದ ನಾಯಕ ನಟ, ಮಗ ನಿಖಿಲ್‌ ಗೌಡ ಅವರಿಗೆ ಹೆಣ್ಣು ನೋಡುವುದಕ್ಕಾಗಿ ಕುಮಾರಸ್ವಾಮಿ ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ.

ಉದ್ಯಮಿ ಬೋದೆಪುಡಿ ಶಿವಕೋಟೇಶ್ವರ ರಾವ್‌ ಅವರ ಮನೆಗೆ ಕುಮಾರಸ್ವಾಮಿ ದಂಪತಿ ಭೇಟಿ ನೀಡಿದ್ದರು. ರಾವ್‌ ಅವರು ಪ್ರಾಫಿಟ್‌ ಶೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ. ಈ ಕಂಪನಿ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪಾದರಕ್ಷೆ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ಹೊಂದಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ರಾವ್‌ ಅವರು ವ್ಯವಹಾರ ಹೊಂದಿದ್ದಾರೆ.

ರಾವ್‌ ಮಗಳು ಸಹಜಾ ಅವರು ಈ ಕಂಪನಿಯ ಕಾರ್ಯಾಚರಣೆ ವ್ಯವಸ್ಥಾಪಕಿಯಾಗಿದ್ದಾರೆ. ಅವರು ಬ್ರಿಟನ್‌ನ ವಾರ್‌ವಿಕ್‌ ವಿಶ್ವವಿದ್ಯಾಲಯದಿಂದ ಲಾಜಿಸ್ಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ADVERTISEMENT

ಕುಮಾರಸ್ವಾಮಿ ಅವರು ಮದುವೆ ಮಾತುಕತೆಗೆ ಬಂದದ್ದಲ್ಲ ಎಂದು ರಾವ್‌ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಒಂದು ತಾಸು ರಾವ್‌ ಮನೆಯಲ್ಲಿದ್ದರು. ತಮ್ಮ ಮಗನ ಜತೆಗೆ ಸಹಜಾ ಮದುವೆ ಮಾಡಲು ಕುಮಾರಸ್ವಾಮಿ ಉತ್ಸುಕರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.