ನಿಪ್ಪಾಣಿ: ‘ಬಿಜೆಪಿ ಸರ್ಕಾರವಿದ್ದ ಮಣಿಪುರದಲ್ಲಿ ಜರುಗಿದ ಹಿಂಸಾಚಾರದಲ್ಲಿ 54 ಜನರು ಸಾವನ್ನಪ್ಪಿದ್ದಾರೆ. ಪ್ರಧಾನಿ ಮೋದಿ ಅವರು ಅಲ್ಲಿಯ ಹಿಂಸಾಚಾರ, ಸಾವು– ನೋವುಗಳನ್ನು ತಡೆಯುವ ಬದಲು ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು’ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ವಾಗ್ದಾಳಿ ನಡೆಸಿದರು.
ನಿಪ್ಪಾಣಿ ಕ್ಷೇತ್ರದ ಎನ್ಸಿಪಿ ಅಭ್ಯರ್ಥಿ ಉತ್ತಮ ಪಾಟೀಲ ಪರ ಸೋಮವಾರ ಪ್ರಚಾರ ಭಾಷಣ ಮಾಡಿದ ಅವರು, ‘ಅಧಿಕಾರ ಸಿಕ್ಕ ನಂತರ ಅದನ್ನು ಸರ್ವರ ಹಿತಕ್ಕಾಗಿ ಬಳಸಬೇಕು. ಆದರೆ ‘ಶೇ 40ರ ಫಾರ್ಮುಲಾ’ ಅಳವಡಿಸಿಕೊಂಡಿದ್ದ ಈ ರಾಜ್ಯ ಸರ್ಕಾರದ ನೀತಿ ಬಹುತೇಕ ಎಲ್ಲ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಪಸರಿಸುವ ಭೀತಿಯಿದೆ’ ಎಂದು ಟೀಕಿಸಿದರು.
‘ಭೂತಾಯಿಯನ್ನು ನಿಜವಾಗಿ ಪ್ರೀತಿಸುವ ರೈತರು ಗೌರವದಿಂದ ಬದುಕುವಂಥ ಪರಿಸ್ಥಿತಿ ನಿರ್ಮಿಸದಿದ್ದಲ್ಲಿ ಈ ದೇಶ ನಡೆಸುವುದು ಕಷ್ಟವಾಗುತ್ತದೆ. ಕರ್ನಾಟಕವು ಕೃಷಿಗೆ ಉತ್ತಮವಾದ ರಾಜ್ಯ. ಇಲ್ಲಿ ವಿದ್ಯುತ್, ನೀರು, ಕೃಷಿ, ಮೊದಲಾದ ವಿಷಯಗಳಲ್ಲಿ ಗಮನ ಹರಿಸಬೇಕು. ತಂಬಾಕು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಈಗ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಕಬ್ಬಿಗೆ ಹೆಚ್ಚಿನ ದರ ಸಿಗುವಂತಾಗಲು ಎನ್ಸಿಪಿ ಅಭ್ಯರ್ಥಿ ಗೆಲ್ಲಿಸಿ’ ಎಂದು ಮನವಿ ಮಾಡಿದರು.
ಅಭ್ಯರ್ಥಿ ಉತ್ತಮ ಪಾಟೀಲ ಮಾತನಾಡಿ, ‘ಕ್ಷೇತ್ರದಲ್ಲಿ ಕುಡಿಯಲು ನೀರಿಲ್ಲ. ಆದರೆ, ಶಾಸಕಿ ಶಶಿಕಲಾ ಜೊಲ್ಲೆ ಈಜಲು ನೀರು ತರಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.
ಎನ್ಸಿಪಿ ಮಹಾರಾಷ್ಟ್ರದ ಅಧ್ಯಕ್ಷ ಜಯಂತ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.