ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಕಡಿತಗೊಳಿಸಿರುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಪ್ರಕಟಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರಿಗಣಿಸುವ ಮತ್ತು ಪರಿಗಣಿಸದ ಪಠ್ಯದ ಅಂಶಗಳನ್ನು http://dsert.kar.nic.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ನಿಂದಾಗಿ ಶಾಲೆಗಳು ತಡವಾಗಿ ಆರಂಭವಾಗಿರುವುದನ್ನು ಪರಿಗಣಿಸಿ ಶೇಕಡ 20ರಷ್ಟು ಪಠ್ಯ ಕಡಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು.
ಇತಿಹಾಸ ವಿಷಯದಲ್ಲಿ ’20ನೇ ಶತಮಾನದ ರಾಜಕೀಯ ಆಯಾಮಗಳು’ ಅಧ್ಯಾಯ, ರಾಜ್ಯಶಾಸ್ತ್ರ ವಿಷಯದಲ್ಲಿ ’ಜಾಗತಿಕ ಸಂಸ್ಥೆಗಳು’, ಸಮಾಜ ವಿಜ್ಞಾನದಲ್ಲಿ ’ಸಾಮಾಜಿಕ ಸಮಸ್ಯೆಗಳು’ ಮತ್ತು ಭೂಗೋಳ ವಿಷಯದಲ್ಲಿ ’ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು’ ಹಾಗೂ ’ಭಾರತದ ಜನಸಂಖ್ಯೆ’ ಅಧ್ಯಾಯಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅರ್ಥಶಾಸ್ತ್ರ ವಿಷಯದಲ್ಲಿ ’ಹಣ ಮತ್ತು ಸಾಲ’ ಹಾಗೂ ’ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ’ ಅಧ್ಯಾಯಗಳು ಮತ್ತು ವ್ಯವಹಾರ ಅಧ್ಯಯನದಲ್ಲಿ ’ವ್ಯವಹಾರ ಜಾಗತೀಕರಣ’ ಅಧ್ಯಾಯಗಳನ್ನು ಕೈಬಿಡಲಾಗಿದೆ.
ಪ್ರಥಮ ಭಾಷೆ ಕನ್ನಡ ವಿಷಯದ ಗದ್ಯ ಭಾಗದಲ್ಲಿ ’ಸುಕುಮಾರ ಸ್ವಾಮಿಯ ಕಥೆ’ ಮತ್ತು ಪದ್ಯ ಭಾಗದಲ್ಲಿ ’ಕೆಮ್ಮನೆ ಮೀಸೆವೊತ್ತನೇ’ ಅಧ್ಯಾಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.