ADVERTISEMENT

ಸುಸ್ಥಿರ ಅಭಿವೃದ್ದಿಯಲ್ಲಿ ಕರ್ನಾಟಕ 40ನೇ ಸ್ಥಾನಕ್ಕೆ ಕುಸಿದಿದೆ: ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 9:47 IST
Last Updated 22 ಜನವರಿ 2020, 9:47 IST
ಬಿ.ಜೆ.ಪುಟ್ಟಸ್ವಾಮಿ
ಬಿ.ಜೆ.ಪುಟ್ಟಸ್ವಾಮಿ   

ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾರಣದಿಂದಾಗಿ ಸುಸ್ಥಿರ ಅಭಿವೃದ್ದಿ ಗುರಿ ಸಾಧನೆ ವಿಷಯದಲ್ಲಿ ಕರ್ನಾಟಕ 40ನೇ ಸ್ಥಾನಕ್ಕೆ ಕುಸಿದಿದೆ’ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ‘ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ಹೆಚ್ಚಿನ ಒತ್ತಡ ಇದೆ. ಹಾಗಾಗಿ ತುಮಕೂರು ಅಥವಾ ಕೋಲಾರದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು. ಗುಲ್ಬರ್ಗಾ ವಿಮಾನ ನಿಲ್ದಾಣದ ಮಾದರಿಯಲ್ಲಿ ಬೀದರ್ ಮತ್ತು ವಿಜಯಪುರದಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ’ ಎಂದರು.

‘ರಾಜ್ಯದ 4600 ಹಳ್ಳಿಗಳಿಗೆ ಇದುವರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಸೂಕ್ತ ರಸ್ತೆಗಳಿಲ್ಲದ ಕಾರಣ ಬಸ್‌ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲ ಹಳ್ಳಿಗಳಲ್ಲಿ ವಾಹನ ಸಂಚಾರ ಯೋಗ್ಯ ರಸ್ತೆಗಳ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಸಲಹೆ ಮಾಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣ ಹೆಚ್ಚಿಸಬೇಕಾಗಿದೆ. ಪ್ರಸಕ್ತ ರಾಜ್ಯದಲ್ಲಿ ಅಪರಾಧಿ ಎಂದು ಘೋಷಿಸುವ ಪ್ರಮಾಣ ಕೇವಲ ಶೇಕಡಾ 2 ರಿಂದ 4ರಷ್ಟು ಮಾತ್ರ ಇದೆ. ಈ ಪ್ರಮಾಣ ಹೆಚ್ಚಿಸಲು ಶೀಘ್ರದಲ್ಲೇ ಕಾಯ್ದೆ ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.