
ಬೆಂಗಳೂರು: ‘ಚಾಲ್ತಿಯಲ್ಲಿರುವ ಶೇ 50ರ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಶೇ 56ಕ್ಕೆ ಮೀಸಲಾತಿ ಹೆಚ್ಚಿಸಿರುವ ಅನುಸಾರ ಹೊಸದಾಗಿ ಅಧಿಸೂಚನೆ ಹೊರಡಿಸಕೂಡದು’ ಎಂದು ಪುನರುಚ್ಚರಿಸಿರುವ ಹೈಕೋರ್ಟ್, ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.
ಶೇ 50ಕ್ಕೂ ಹೆಚ್ಚು ಪ್ರಮಾಣದ ಮೀಸಲಾತಿ ನೀಡುವುದನ್ನು ಆಕ್ಷೇಪಿಸಿ, ‘ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ‘ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬೇಕು. ಹಾಲಿ ಅರ್ಜಿಗಳನ್ನು ನಿರ್ಧರಿಸುವತನಕ ಹೆಚ್ಚುವರಿ ಶೇ 6ರ ಮೀಸಲಾತಿ ಅನ್ವಯ ಮಾಡುವುದಿಲ್ಲ. ಶೇ 56ರ ಮೀಸಲಾತಿ ಪ್ರಕಾರ ನೇಮಕಾತಿ ನಡೆಸುತ್ತೇವೆ. ಶೇ 50ಕ್ಕೆ ಮಾತ್ರ ಆದೇಶ ನೀಡಿ, ಉಳಿದ ಶೇ 6ಕ್ಕೆ ನ್ಯಾಯಾಲಯ ನಿರ್ಧಾರ ಮಾಡಿದ ಬಳಿಕ ಆದೇಶ ನೀಡಲಾಗುವುದು’ ಎಂದರು.
ಇದಕ್ಕೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಂಗನಾಥ್ ಜೋಯಿಸ್, ‘ಶೇ 50 ಅನ್ನು ಮೀರಿ ಮೀಸಲಾತಿ ನೀಡುತ್ತೇವೆ. ನಂತರ ಅದನ್ನು ಸರಿಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಮೀಸಲಾತಿ ಶೇ 50 ಅನ್ನು ಮೀರುವುದಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ಅನುಮತಿ ನೀಡಿಲ್ಲ. ಸರ್ಕಾರ ಅಕ್ರಮ ನೇಮಕಾತಿ ಮಾಡಿ, ಆನಂತರ ಅದನ್ನು ಸರಿಪಡಿಸುವ ಯತ್ನಕ್ಕೆ ಮುಂದಾಗಿದೆ’ ಎಂದು ದೂರಿದರು.
ಅರ್ಜಿದಾರರ ಪರ ಮತ್ತೊಬ್ಬ ವಕೀಲ ನಚಿಕೇತ್ ಜೋಶಿ, ‘ಮೀಸಲಾತಿ ಹೆಚ್ಚಿಸಿರುವುದನ್ನು ಆಧರಿಸಿ ನೇಮಕಾತಿ, ಆಯ್ಕೆ ಮಾಡುವ ಸಂಬಂಧ ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ಅಧಿಸೂಚನೆ ಹೊರಡಿಸಕೂಡದು ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶ ಮಾಡಿತ್ತು. ಇದರ ಮರುಪರಿಶೀಲನೆ, ಮಾರ್ಪಾಡು ಅಥವಾ ಅದನ್ನು ಪ್ರಶ್ನಿಸಲಾಗಿಲ್ಲ. ಈಗ ಮಧ್ಯಂತರ ಅರ್ಜಿಯ ಮೂಲಕ ಮಾರ್ಪಾಡು ಕೋರಲಾಗಿದೆ. ಶೇ 50ರ ಮೀಸಲಾತಿಯ ಪ್ರಕಾರ ನೇಮಕಾತಿ ನಡೆಯಲಿ. ಉಳಿದಂತೆ ಹೆಚ್ಚುವರಿ ಪ್ರಮಾಣಕ್ಕೆ ನ್ಯಾಯಾಲಯ ರಿಟ್ ಅರ್ಜಿ ಕುರಿತು ನಿರ್ಧರಿಸಿದ ಬಳಿಕ ನೇಮಕಾತಿ ನಡೆಸಬಹುದು’ ಎಂದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಅವರು ಸೂಚನೆ ಪಡೆಯಲು ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ’ ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರುವರಿ 12ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.