ADVERTISEMENT

ಪಿಎಸ್ಐ ಅಕ್ರಮ: ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ; ಹೈಕೋರ್ಟ್‌

ಸಿಐಡಿ ಡಿಜಿಪಿಗೆ ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 21:00 IST
Last Updated 30 ಜೂನ್ 2022, 21:00 IST
   

ಬೆಂಗಳೂರು: ‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಹಿಂದೆ ಯಾವುದೇ ಸಚಿವ, ಅಧಿಕಾರಿ ಅಥವಾ ಪ್ರಭಾವಿ ವ್ಯಕ್ತಿ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ಸಿಐಡಿ ಡಿಜಿಪಿ ಪಿ.ಎಸ್. ಸಂಧು ಅವರಿಗೆ ನಿರ್ದೇ ಶಿಸಿರುವ ಹೈಕೋರ್ಟ್, ‘ಈ ಪ್ರಕರಣದ ತನಿಖೆಯ ಮೇಲೆ ಕೋರ್ಟ್ ಸಂಪೂರ್ಣ ನಿಗಾ ವಹಿಸಲಿದೆ’ ಎಂದು ತಿಳಿಸಿದೆ.

ಪ್ರಕರಣದ ಬಂಧಿತ ಆರೋಪಿ ಗಳಾದ ಹಾಸನದ ಸಿ.ಎನ್. ಶಶಿಧರ್ ಮತ್ತು ಮಂಡ್ಯದ ಆರ್.ಶರತ್‌ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆಗೆ ಖುದ್ದು ಹಾಜರಾಗಿದ್ದ ಸಿಐಡಿ ಡಿಜಿಪಿ ಸಂಧು ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

ಈ ವೇಳೆ ಸಂಧು ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿ ಸಂದೇಶ್, 'ಈ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಗಂಭೀರ ವಿಚಾರ. ಪೊಲೀಸರು ಹಾಗೂ ಗಣ್ಯರು ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ವಿರುದ್ಧ ಆರೋಪಗಳಿವೆ. ಪೊಲೀಸ್ ಅಧಿಕಾರಿಗಳೇ ಮಧ್ಯವರ್ತಿಗಳಾಗಿರುವ ಆರೋಪಗಳಿವೆ. ಆದ್ದರಿಂದ, ಪ್ರತಿಯೊಂದು ಅಂಶದ ಕುರಿತು ಸಮರ್ಪಕ ತನಿಖೆ ನಡೆಸಿ ಸತ್ಯಸಂಗತಿ ಹೊರಗೆ ಎಳೆಯಬೇಕು. ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ' ಎಂದು ಎಚ್ಚರಿಸಿದರು.

ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿಪಡಿಸಿದ ನ್ಯಾಯಪೀಠ, ಅಂದು ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.