ಬೆಂಗಳೂರು: ರಾಜ್ಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಡಿಸೆಂಬರ್ 10 ರಂದು ನಡೆಯುವ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಪ್ರಮುಖವಾಗಿ ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಮಗ ಸೂರಜ್ ರೇವಣ್ಣ ಅವರಿಗೆ ಹಾಸನದಿಂದಟಿಕೆಟ್ ನೀಡಿದೆ. ಈ ಮೂಲಕ ಅಧಿಕೃತವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಪ್ರವೇಶಿಸಿದಂತಾಗಿದೆ. ಟಿಕೆಟ್ ತಮಗೇ ಖಾತ್ರಿ ಎಂದು ತಿಳಿದಿದ್ದ ಸೂರಜ್ ರೇವಣ್ಣ ಕಳೆದ ಶನಿವಾರವೇ ನಾಮಪತ್ರ ಸಲ್ಲಿಸಿದ್ದರು.
ಉಳಿದಂತೆ ಮಂಡ್ಯದಿಂದ ಅಪ್ಪಾಜಿಗೌಡ ಅವರಿಗೆ, ತುಮಕೂರಿನಿಂದ ಅನಿಲ್ ಕುಮಾರ್ ಅವರಿಗೆ, ಮೈಸೂರಿನಿಂದ ಸಿ.ಎನ್.ಮಂಜೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಲಾರದಿಂದ ವಕ್ಕಲೇರಿ ರಾಮು ಅವರಿಗೆ, ಬೆಂಗಳೂರು ಗ್ರಾಮಾಂತರದಿಂದ ಎಚ್.ಎಂ ರಮೇಶ್ಗೌಡ ಅವರಿಗೆ ಹಾಗೂ ಕೊಡಗಿನಿಂದ ಎಚ್.ಯು ಇಸಾಕ್ ಖಾನ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಇನ್ನು ಪರಿಷತ್ ಚುನಾವಣೆಗಾಗಿ ಬಿಜೆಪಿ ಕದ ತಟ್ಟಿ ನಿರಾಸೆಗೊಳಗಾಗಿದ್ದ ಸಂದೇಶ್ ನಾಗರಾಜ್ ಅವರು ಕಡೆ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ವರಿಷ್ಠರು ಸಂದೇಶ್ ನಾಗರಾಜ್ ಅವರನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಜೆಡಿಎಸ್ ಏಳರಲ್ಲಿ ಮಾತ್ರ ಸ್ಪರ್ಧಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.