ದಕ್ಷಿಣ ಕನ್ನಡ ಜಿಲ್ಲೆಯ ಅರ್ಕಾಣದಲ್ಲಿ ಗುಡ್ಡ ರಸ್ತೆಗೆ ಕುಸಿಯಿತು
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಮಂದುವರಿದಿದ್ದು, ಗುರುವಾರವೂ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ.
ಉಡುಪಿ ಜಿಲ್ಲೆ ಮತ್ತು ದಕ್ಷಿಣಕನ್ನಡದ ಮಂಗಳೂರು, ಉಳ್ಳಾಲ, ಬಂಟ್ವಾಳ, ಕಡಬ, ಮೂಲ್ಕಿ, ಮೂಡುಬಿದಿರೆ ವ್ಯಾಪ್ತಿಯಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ 25ರಂದೂ ರಜೆ ಘೋಷಿಸಲಾಗಿದೆ.
ಉಳ್ಳಾಲ ತಾಲ್ಲೂಕು ಪಜೀರು ಗ್ರಾಮದ ಅರ್ಕಾಣದಲ್ಲಿ ರಸ್ತೆಗೆ ಗುಡ್ಡ ಕುಸಿದುಬಿದ್ದಿದೆ. ಅರ್ಧ ಭಾಗದಷ್ಟು ರಸ್ತೆ ಮಣ್ಣಿನಿಂದ ಆವೃತವಾಗಿದ್ದು, ಸಂಚಾರ ವ್ಯಸ್ತವಾಗಿದೆ.
ಕಾರ್ಕಳ ತಾಲ್ಲೂಕಿನ ಮಾಳ - ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವೆಡೆ ಗುಡ್ಡ ಜರಿದಿದೆ. ಬ್ರಹ್ಮಾವರ ವ್ಯಾಪ್ತಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
‘26ರವರೆಗೆ ಅರಬ್ಬಿಸಮುದ್ರ ಪ್ರಕ್ಷುಬ್ದ ವಾಗಿರಲಿದೆ. ಮೀನುಗಾರರು ಸಮುದ್ರಕ್ಕೆ ತೆರಳಬಾರದು’ ಎಂದು ಹವಾಮಾನ ಇಲಾಖೆ, ಮೀನುಗಾರಿಕೆ ಇಲಾಖೆಯು ಸಲಹೆ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ನದಿಗಳ ಹರಿವು ಹೆಚ್ಚಾಗಿದೆ. ಶೃಂಗೇರಿ, ಕಳಸ, ಮೂಡಿಗೆರೆ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಕೊಪ್ಪ, ಎನ್.ಆರ್.ಪುರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಯಿತು. ಚಿಕ್ಕಮಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿಯಿತು.
ಶಿವಮೊಗ್ಗ ವರದಿ: ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಮತ್ತು ಸಾಗರ ತಾಲ್ಲೂಕಿನ ಹಲವೆಡೆ ಗುರುವಾರ ಬೆಳಿಗ್ಗೆಯಿಂದಲೂ ಮಳೆ ಅಬ್ಬರಿಸುತ್ತಿದೆ. ಜಿಲ್ಲೆಯ ಹೊಸನಗರ, ಭದ್ರಾವತಿ, ತಾಲ್ಲೂಕಿನಲ್ಲೂ ನಿರಂತರ ಮಳೆಯಾಗುತ್ತಿದೆ.
ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ, ಮೇಗರವಳ್ಳಿ, ಹೊಸಹಳ್ಳಿ, ಹೊನ್ನೇತಾಳು, ತೀರ್ಥಮತ್ತೂರು, ಸಾಲ್ಗಡಿ, ನೆರಟೂರು, ಆರಗ, ತೂದೂರು, ಬೆಜ್ಜವಳ್ಳಿ, ಬಾಂಡ್ಯ ಕುಕ್ಕೆ, ತ್ರಯಂಬಕಪುರ, ಹಾದಿಗಲ್ಲು ಸುತ್ತಮುತ್ತಲೂ ಉತ್ತಮ ರೀತಿಯಲ್ಲಿ ಸುರಿದಿದೆ.
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ಹತ್ತಾರು ಮನೆಗಳಿಗೆ ಹಾನಿಯಾಗಿದೆ.
ಮಲೆನಾಡು ಭಾಗದ ಶಿರಸಿ, ಸಿದ್ದಾಪುರದಲ್ಲೂ ಆಗಾಗ ರಭಸದ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಕುಮಟಾ, ಭಟ್ಕಳದಲ್ಲಿ 10ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿದಿದೆ.
ಮಡಿಕೇರಿ ವರದಿ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ನಿರಂತರ ಮಳೆ ಆಗುತ್ತಿದೆ. ಭಾಗಮಂಡಲದಲ್ಲಿ ಜೋರು, ಸೋಮವಾರಪೇಟೆಯಲ್ಲಿ ಸಾಧಾರಣ ಮಳೆಯಾಗಿದೆ.
ಮೈಸೂರು ನಗರದಲ್ಲೂ ಆಗಾಗ ತುಂತುರು ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.