ADVERTISEMENT

ಒಕ್ಕಲಿಗರ ನಿಗಮ: ನೋಂದಣಿ ಬಳಿಕ ಅನುದಾನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 22:01 IST
Last Updated 16 ಮಾರ್ಚ್ 2022, 22:01 IST

ಬೆಂಗಳೂರು: ಒಕ್ಕಲಿಗರ ಅಭಿವೃದ್ಧಿ ನಿಗಮದ ನೋಂದಣಿ ಪ್ರಕ್ರಿಯೆ ನಡೆದಿದೆ. ಆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅನುದಾನ ಬಿಡುಗಡೆ ಆಗಲಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಬುಧವಾರ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಕೃಷ್ಣಬೈರೇಗೌಡರ ಪ್ರಶ್ನೆಗೆ ಅವರು ಉತ್ತರಿಸಿದರು.

‘ನಿಗಮದ ನೋಂದಣಿ ಆಗದೇ ಹಣವನ್ನು ಖರ್ಚು ಮಾಡಲು ಬರುವುದಿಲ್ಲ. ನಿಗಮ ಸ್ಥಾಪನೆಗಾಗಿ ಅರ್ಜಿ ಮುಂದೆ ಬಂದಿದೆ. ಆದಷ್ಟು ಬೇಗ ನೋಂದಣಿ ಮುಗಿಸಿ ಹಣವನ್ನು ಖರ್ಚು ಮಾಡಲಿದ್ದೇವೆ’ ಎಂದು ಭರವಸೆ ನೀಡಿದರು. ವಿಷಯ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ, ನಿಗಮ ರಚನೆ ಮಾಡಿ ₹500 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಕಳೆದ ವರ್ಷವೇ ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಸರ್ಕಾರ ಬಡ ಒಕ್ಕಲಿಗರ ಹೆಸರಿನಲ್ಲಿ ಪ್ರಚಾರ ತೆಗೆದುಕೊಂಡಿತು ಎಂದು ಅವರು ತರಾಟೆಗೆ ತೆಗೆದುಕೊಂಡರು.

ADVERTISEMENT

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿಯ ಕೆ.ಜೆ.ಬೋಪಯ್ಯ, ‘ಒಕ್ಕಲಿಗರ ನಿಗಮದ ವಿಚಾರ ಸ್ವಲ್ಪ ತಡವಾಗಿದೆ. ಆದರೆ, ಒಕ್ಕಲಿಗರ ಸಂಘದ ಆಸ್ತಿ ಏನಾಯ್ತು. ಎಲ್ಲಿ ಹೋಯ್ತು ಹೇಳಿ’ ಎಂದು ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.