ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿನ ಕುಲಸಚಿವ ಪ್ರೊ. ಕಲ್ಲಪ್ಪ.ಎಂ.ಹೊಸಮನಿ ಅವರನ್ನು ಅಮಾನತು ಮಾಡಿರುವ ಸಿಂಡಿಕೇಟ್, ಅವರ ವಿರುದ್ಧ ವಿವರವಾದ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿದೆ.
ಈ ಕುರಿತು ಮಾಹಿತಿ ನೀಡಿದ ಕುಲಪತಿ ಪ್ರೊ. ಪ್ರಮೋದ ಗಾಯಿ, ‘ಲೈಂಗಿಕ ಕಿರುಕುಳ, ವಿಶ್ವವಿದ್ಯಾಲಯದ ಅನುಮತಿ ಇಲ್ಲದೆ ಮಾಹಿತಿ ನೀಡಿರುವುದು, ಕೃತಿಚೌರ್ಯ, ಸರ್ಕಾರಿ ವಾಹನವನ್ನು ಅಪಘಾತಕ್ಕೀಡು ಮಾಡಿರುವುದು ಸೇರಿದಂತೆ ಸುಮಾರು ಹತ್ತು ಆರೋಪಗಳು ಪ್ರೊ. ಹೊಸಮನಿ ವಿರುದ್ಧ ಇದ್ದವು. ಸಿಂಡಿಕೇಟ್ ಸದಸ್ಯರ ನೇತೃತ್ವದ ಸಮಿತಿ ತನಿಖೆ ನಡೆಸಿದಾಗ ಈ ಆರೋಪಗಳು ಸಾಕ್ಷ್ಯ ಸಹಿತ ಸಾಬೀತಾಗಿವೆ’ ಎಂದರು.
‘ಹೀಗಾಗಿ ಹೊಸಮನಿ ಅವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ ನಿವೃತ್ತ ನ್ಯಾಯಾಧೀಶ ಬಿ.ಎ.ಮುಚ್ಚಂಡಿ ನೇತೃತ್ವದ ವಿಚಾರಣಾ ಸಮಿತಿ ರಚಿಸಲು ಸಿಂಡಿಕೇಟ್ ನಿರ್ಧರಿಸಿದೆ. ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಸಮಿತಿಗೆ ತಿಳಿಸಲಾಗಿದೆ’ ಎಂದರು.
‘ತಮ್ಮ ಹುದ್ದೆ ಮೀರಿ ರಾಜ್ಯಪಾಲರ ಕಚೇರಿಗೆ ಪತ್ರ ವ್ಯವಹಾರ ನಡೆಸಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು, ಈ ಕುರಿತು ಹೊಸಮನಿ ಅವರಿಂದ ವಿವರಣೆ ಪಡೆದು ಕಳುಹಿಸಬೇಕು ಎಂದು ಸೂಚಿಸಿದ್ದರು. ಆದರೆ, ಪ್ರೊ. ಹೊಸಮನಿ ಅವರಲ್ಲಿ ವಿವರಣೆ ಕೇಳಿದರೂ ಅದಕ್ಕೆ ಅವರು ಉತ್ತರಿಸಿಲ್ಲ’ ಎಂದು ಪ್ರೊ. ಗಾಯಿ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.