ADVERTISEMENT

ಕೆಎಟಿ ಬೆಳಗಾವಿ ಪೀಠ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 17:54 IST
Last Updated 19 ಜನವರಿ 2019, 17:54 IST

ಬೆಂಗಳೂರು: ಉದ್ಘಾಟನೆಗೊಂಡ ಒಂದು ತಿಂಗಳ ಅವಧಿಯಲ್ಲೇ ‘ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ’ (ಕೆಎಟಿ) ಬೆಳಗಾವಿ ಪೀಠವು ಆಡಳಿತಾತ್ಮಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಈ ಕುರಿತಂತೆ ಕೆಎಟಿ ಅಧಿಸೂಚನೆ ಹೊರಡಿಸಿದ್ದು, ‘ಪೀಠವು 2019ರ ಜನವರಿ 16ರಿಂದ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಶೀಘ್ರವೇ ಪೀಠವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಕೆಎಟಿ ರಿಜಿಸ್ಟ್ರಾರ್ ಕೆ.ಅಮರನಾರಾಯಣ ತಿಳಿಸಿದ್ದಾರೆ.

ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಕೆಎಟಿ ಪೀಠ ಸ್ಥಾಪಿಸಲು ಈ ಹಿಂದಿನ ಸರ್ಕಾರ 2015ರಲ್ಲಿ ನಿರ್ಧಾರ ಕೈಗೊಂಡಿತ್ತು. ಈ ದಿಸೆಯಲ್ಲಿ 2018ರ ಡಿಸೆಂಬರ್ 17ರಂದು ಬೆಳಗಾವಿಯಲ್ಲಿ ಕೆಎಟಿ ಪೀಠವನ್ನು ಉದ್ಘಾಟಿಸಲಾಗಿತ್ತು.

ADVERTISEMENT

ಈ ಪೀಠಕ್ಕೆ ಪ್ರಧಾನ ಪೀಠದಿಂದ 150 ಪ್ರಕರಣಗಳನ್ನು ವರ್ಗಾವಣೆ ಮಾಡಲಾಗಿತ್ತು. ಏತನ್ಮಧ್ಯೆ ಈ ಪೀಠದಲ್ಲಿ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್‌ ಮತ್ತು ನ್ಯಾಯಾಂಗ ಸದಸ್ಯ ವಿ.ಪಿ.ಬಳಿಗಾರ್ ಅವರು ಜನವರಿ 7ರಿಂದ 19ರವರೆಗೆ ಕಾರ್ಯ ನಿರ್ವಹಿಸಿದ್ದರು.

ಬೆಳಗಾವಿ ಪೀಠದ ವ್ಯಾಪ್ತಿಗೆ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಾಕಿ ಇರುವ 2,644 ಪ್ರಕರಣಗಳು ವಿಚಾರಣೆಗೆ ಒಳಪಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.