ADVERTISEMENT

ರಾಜ್ಯ ಒಕ್ಕಲಿಗರ ಸಂಘಕ್ಕೆ ಬಿ. ಕೆಂಚಪ್ಪಗೌಡ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 19:11 IST
Last Updated 17 ಜೂನ್ 2023, 19:11 IST
   

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದ ಸಿ.ಎನ್‌.ಬಾಲಕೃಷ್ಣ ಮತ್ತು ಅವರ ಬೆಂಬಲಿಗರ ತಂಡವನ್ನು ಕಾರ್ಯಕಾರಿ ಸಮಿತಿಯಿಂದ ಪದಚ್ಯುತಗೊಳಿಸಿ, ಬಿ. ಕೆಂಚಪ್ಪಗೌಡ ಗುಂಪಿನ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನಗರದ ರಾಜ್ಯ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ಜಯನಗರದ ಬಿ.ಕೆಂಚಪ್ಪಗೌಡ (ಅಧ್ಯಕ್ಷ), ಎಲ್‌. ಶ್ರೀನಿವಾಸ್‌ ಹಾಗೂ ಸಿ. ದೇವರಾಜು (ಉಪಾಧ್ಯಕ್ಷರು), ಎಚ್‌.ಸಿ. ಜಯಮುತ್ತು (ಪ್ರಧಾನ ಕಾರ್ಯದರ್ಶಿ), ಸಿ.ಜೆ. ಗಂಗಾಧರ (ಸಹಾಯಕ ಕಾರ್ಯದರ್ಶಿ), ಸಿ.ಎಂ. ಮಾರೇಗೌಡ (ಖಜಾಂಚಿ) ಆಯ್ಕೆಯಾಗಿದ್ದಾರೆ. ತಮ್ಮದೇ ಅಧಿಕೃತ ಆಡಳಿತ ಮಂಡಳಿ ಎಂದು ಇವರು ಘೋಷಿಸಿಕೊಂಡಿದ್ದಾರೆ.

ಕೆಲ ತಿಂಗಳಿಂದ ಒಕ್ಕಲಿಗರ ಸಂಘದಲ್ಲಿ ಬಾಲಕೃಷ್ಣ ನೇತೃತ್ವದ ಕಾರ್ಯಕಾರಿ ಸಮಿತಿ ವಿರುದ್ಧ ಈ ಗುಂಪು ಬಂಡಾಯ ಎದ್ದಿತ್ತು.

ADVERTISEMENT

‘ವಿ.ವಿ ಪುರಂ ಕೃಷ್ಣರಾಜ ರಸ್ತೆಯ ರಾಜ್ಯ ಒಕ್ಕಲಿಗರ ಸಂಘದ ಹೆಸರಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗೆ ಸಭೆ ಕರೆಯಲಾಗಿದೆ’ ಎಂದು ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ ಹೆಸರಿನಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಇದರ ವಿರುದ್ಧ ಬಾಲಕೃಷ್ಣ ನೇತೃತ್ವದ ಗುಂಪು ಈಚೆಗೆ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಈ ಅರ್ಜಿ ವಿಚಾರಣೆಯನ್ನು ಆಗಸ್ಟ್‌ 28ಕ್ಕೆ ಮುಂದೂಡಿದ್ದರಿಂದ ಶನಿವಾರ ಚುನಾವಣೆ ನಡೆದಿದೆ.

‘ನಮ್ಮ ತಂಡಕ್ಕೆ ಬಹುತೇಕ ನಿರ್ದೇಶಕರ ಬೆಂಬಲ ಇದೆ. ಹಿಂದಿನ ಆಡಳಿತ ಮಂಡಳಿಯಲ್ಲಿದ್ದ 21 ಮಂದಿ ನಿರ್ದೇಶಕರು ಬೆಂಬಲ ನೀಡಿದ್ದಾರೆ. ಗೊಂದಲ ಇಲ್ಲ’ ಎಂದು ಎಲ್‌.ಶ್ರೀನಿವಾಸ್‌ ತಿಳಿಸಿದ್ದಾರೆ.

‘2021ರ ಡಿ.12ರಂದು ಸಂಘದ ಕಾರ್ಯಕಾರಿ ಸಮಿತಿಗೆ ನಡೆದಿದ್ದ ಚುನಾವಣೆಯಲ್ಲಿ 35 ಮಂದಿ ಸದಸ್ಯರು ಆಯ್ಕೆಯಾಗಿ
ದ್ದೆವು. ಬೈಲಾ ಪ್ರಕಾರ 30 ತಿಂಗಳ ಎರಡು ಅವಧಿ ಇರುತ್ತದೆ. ಆದರೆ, ಅಧಿಕಾರ ಹಂಚಿಕೆ ಮಾತುಕತೆ ನಡೆದಿರಲಿಲ್ಲ’ ಎಂದು ಬಾಲಕೃಷ್ಣ ಗುಂಪಿ ನಲ್ಲಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ತಿಳಿಸಿದ್ದಾರೆ.

‘ಸಂಘದಲ್ಲಿ ₹ 250 ಕೋಟಿಯಷ್ಟು ಹಣ ಉಳಿಸಿದ್ದೇವೆ. ಹಾಸ್ಟೆಲ್‌, ನರ್ಸಿಂಗ್‌ ಹಾಗೂ ಆಯುರ್ವೇದ ಕಾಲೇಜುಗಳನ್ನು ಹೊಸದಾಗಿ ಆರಂಭಿಸಿದ್ದೆವು. ಈ ಸುಧಾರಣೆ ಕ್ರಮಗಳನ್ನು ಸಹಿಸಿ ಕೊಳ್ಳಲು ತಿಮಿಂಗಿಲಗಳಿಗೆ ಸಾಧ್ಯವಾಗಿಲ್ಲ. ಅವಿರೋಧ ಆಯ್ಕೆ ಘೋಷಿಸಿ ಕೊಂಡವರ ಮೇಲೆ ಅವ್ಯವಹಾರದ ಆರೋಪವಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.