ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯ 6 ಮನೆಗಳಲ್ಲಿ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಮೊಹಮ್ಮದ್ ಶಫಿ (30), ಸಲೀಂ (22), ಯಾಸಿರ್ (26) ಹಾಗೂ ತನ್ವೀರ್ (28) ಬಂಧಿತರು. ಅವರಿಂದ ₹ 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ಹೇಳಿದರು.
‘ಕಳ್ಳತನ ಪ್ರಕರಣದಲ್ಲಿ ಕೆಲ ದಿನಗಳ ಹಿಂದಷ್ಟೇ ಜೈಲು ಸೇರಿದ್ದ ಶಫಿ, ಸಲೀಂ ಹಾಗೂ ಯಾಸಿರ್ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಮೂವರು ಸೇರಿಯೇ ಕೆಂಗೇರಿ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನವೆಸಗಿದ್ದ ಬಗ್ಗೆ ತಪ್ಪೊಪ್ಪಿಕೊಂಡರು. ಇನ್ನೊಬ್ಬ ಆರೋಪಿ ತನ್ವೀರ್ ಬಗ್ಗೆಯೂ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿ ಆತನನ್ನೂ ಬಂಧಿಸಲಾಯಿತು’ ಎಂದು ತಿಳಿಸಿದರು.
‘ಜಿ.ಎನ್. ವಿಜಯಲಕ್ಷ್ಮಿ ಎಂಬುವರು ಮನೆಯ ಹಾಲ್ನಲ್ಲಿದ್ದ ಟಿಪಾಯ್ ಮೇಲೆ ಚಿನ್ನದ ಸರವಿಟ್ಟು ಸ್ನಾನಕ್ಕೆ ಹೋಗಿದ್ದರು. ಅದೇ ವೇಳೆ ಮನೆಗೆ ನುಗ್ಗಿದ್ದ ಆರೋಪಿಗಳು ಚಿನ್ನದ ಸರವನ್ನು ಕದ್ದುಕೊಂಡು ಹೋಗಿದ್ದರು. ಇನ್ನೊಬ್ಬ ದೂರುದಾರ ರವಿಚಂದ್ರ ಗಗನಮಾಲಿ ಎಂಬುವರ ಮನೆಯಲ್ಲೂ ಆರೋಪಿಗಳು ಚಿನ್ನಾಭರಣ ಕದ್ದಿದ್ದರು. ಐಷಾರಾಮಿ ಜೀವನಕ್ಕಾಗಿ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು’ ಎಂದರು.
‘ದೂರುದಾರರ ಮನೆ ಬಳಿಯೇ ಓಡಾಡಿದ್ದ ಆರೋಪಿಗಳು, ಮನೆಯ ಸದಸ್ಯರ ಚಲನವಲನ ತಿಳಿದುಕೊಂಡೇ ಕೃತ್ಯ ಎಸಗಿದ್ದರು’ ಎಂದರು ರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.