ADVERTISEMENT

ಕಿಕ್ ಬ್ಯಾಕ್ ಕಾಂಗ್ರೆಸ್ ಸಂಸ್ಕೃತಿ: ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 21:53 IST
Last Updated 11 ಸೆಪ್ಟೆಂಬರ್ 2021, 21:53 IST
   

ಬೆಂಗಳೂರು: ‘ಜಿಟಿಟಿಸಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿರುವ ವಿ.ಎಸ್. ಉಗ್ರಪ್ಪ ಮತ್ತು ಎಚ್.ಎಂ. ರೇವಣ್ಣ ಅವರಿಗೆ ಲೀಗಲ್ ನೋಟಿಸ್‌ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಕಿಕ್ ಬ್ಯಾಕ್, ಫುಲ್ ಬ್ಯಾಕ್ ಎನ್ನುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿ’ ಎಂದರು.

‘ಜಿಟಿಟಿಸಿ ಟೆಂಡರ್ ಬಗ್ಗೆ ಸುಳ್ಳಿನ ಸೌಧ ಕಟ್ಟಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೀಳುಮಟ್ಟದ ಆರೋಪ. ಅಲ್ಲದೆ, ನಮಗೆ ಮಸಿ ಬಳಿಯುವ ದುರುದ್ದೇಶವಷ್ಟೇ. ಆರೋಪ ಮಾಡಿದವರಿಗೆ ಬುದ್ಧಿಭ್ರಮಣೆ ಆಗಿರಬೇಕು’ ಎಂದರು.

‘ವೈಮಾನಿಕ ಅಭಿವೃದ್ಧಿ ಸಂಸ್ಥೆ(ಎಡಿಎ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಹಾಗೂ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್ಎಂಇ) ಸಚಿವಾಲಯದ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಟೆಂಡರ್ ತಾಂತ್ರಿಕ ಸಮಿತಿಯ ಸದಸ್ಯರು. ಅವರ ಸಲಹೆ ಮೇಲೆಯೇ ಎಲ್ಲವೂ ನಡೆಯುತ್ತಿದೆ. ಬಹುತೇಕ‌ ಉಪಕರಣಗಳನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ. ಅದೂ ಟೆಂಡರ್ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.