ಶಿವಮೊಗ್ಗ: ರಾಜ್ಯದ ರಾಜಕೀಯದಲ್ಲಿ ಕೆಜೆಪಿ (ಕರ್ನಾಟಕ ಜನತಾ ಪಾರ್ಟಿ) ಮತ್ತೆ ಉದಯಿಸಲಿದೆ. ಜೆಡಿಎಸ್ ಆ ಪಕ್ಷದ ಜತೆ ಕೈಜೋಡಿಸಲಿದೆ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೊಸ ಬಾಂಬ್ ಸಿಡಿಸಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸದ್ಯದಲ್ಲೇ ಕೆಜೆಪಿ ಪುನರ್ ಸ್ಥಾಪನೆಯಾಗಲಿದೆ. ಜೆಡಿಎಸ್ ಸಹಯೋಗದಲ್ಲಿ ಸರ್ಕಾರ ರಚಿಸಲು ಸಿದ್ಧತೆ ನಡೆದಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಚೆಗೆ ಕಾಂಗ್ರೆಸ್ ಸೇರಿದ ರಾಜಕೀಯ ಅಲೆಮಾರಿಗಳು (ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಣ) ಕೆಜೆಪಿ ಸೇರಲಿದ್ದಾರೆ ಎಂದು ಚರ್ಚೆಗೆ ನಾಂದಿ ಹಾಡಿದರು.
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಮುಖಂಡರು ಕಾಣಿಸಿಕೊಳ್ಳುತ್ತಿದ್ದಾರೆ. ಈಚೆಗೆ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಪಾದಯಾತ್ರೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಭಾಗಿಯಾಗಿದ್ದರು. ಬಿದರಗೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡರು, ಕುಮಾರಸ್ವಾಮಿ ಭಾವಚಿತ್ರ ಬಳಸಲಾಗಿತ್ತು. ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಬೇರೆ ಪಕ್ಷದವರಿಗೆ ಮಣೆ ಹಾಕುವುದರ ಹಿಂದಿನ ಮರ್ಮವೇನು? ನಾನೂ ಸಭೆ ಆಯೋಜಿಸಿ, ಬೇರೆ ಪಕ್ಷದ ಮುಖಂಡರನ್ನು ಆಹ್ವಾನಸಿದರೆ ಸಹಿಸುವಿರಾ ಎಂದು ಪ್ರಶ್ನಿಸಿದರು.
ಕಿಮ್ಮನೆ ಮಾತಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಮಾತಿನಚಕಮಿ ನಡೆಯಿತು. ‘ಯಾರನ್ನೋ ಕರೆತಂದು ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ’ ಎನ್ನುತ್ತಾ ಕಿಮ್ಮನೆ ಮಧ್ಯದಲ್ಲೇ ಸಭೆಯಿಂದ ಹೊರನಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.