ADVERTISEMENT

ಗಾಂಜಾ ಮಾರಾಟ: ವೈದ್ಯರು ಸೇರಿ ಬಂಧನಕ್ಕೊಳಗಾದ 7 ವಿದ್ಯಾರ್ಥಿಗಳ ಅಮಾನತು

ಬಂಧನಕ್ಕೊಳಗಾದ 7 ವಿದ್ಯಾರ್ಥಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 6:57 IST
Last Updated 21 ಜನವರಿ 2023, 6:57 IST

ಮಂಗಳೂರು: ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ವೈದ್ಯರನ್ನು ನಗರದ ಕಸ್ತೂರಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಆಡಳಿತ ಮಂಡಳಿಯು ಕೆಲಸದಿಂದ ತೆಗೆದುಹಾಕಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಏಳು ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. 

ನಗರದ ಕೆಎಂಸಿ ಆಸ್ಪತ್ರೆಯ ಗಾಯಾಳುಗಳ ಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದ ಡಾ.ಸಮೀರ್ ಹಾಗೂ ಜನರಲ್‌ ಮೆಡಿಸೀನ್ ವಿಭಾಗದಲ್ಲಿ ಹಿರಿಯ ಸ್ಥಾನಿಕ ವೈದ್ಯ (ಪ್ರೊಬೇಷನರಿ) ಡಾ.ಬಾಲಾಜಿ ಅವರನ್ನು ಆಂತರಿಕ ಶಿಸ್ತು ಸಮಿತಿಯ ವರದಿ ಆಧಾರದಲ್ಲಿ ಸಂಸ್ಥೆಯ ಡೀನ್‌ ಡಾ.ಬಿ.ಉನ್ನಿಕೃಷ್ಣನ್‌ ವಜಾಗೊಳಿಸಿದ್ದಾರೆ. 

ಎಂಬಿಬಿಎಸ್‌ ಇಂಟರ್ನ್‌ಷಿಪ್‌ ವಿದ್ಯಾರ್ಥಿನಿ ಕೇರಳದ ನದಿಯಾ ಸಿರಾಜ್‌, ನಾಲ್ಕನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿ ಮಹಾರಾಷ್ಟ್ರದ ಪುಣೆಯ ಇರಾ ಬಾಸಿನ್‌, ಎಂಬಿಬಿಎಸ್‌ ಇಂಟರ್ನ್‌ಷಿಪ್‌ ವಿದ್ಯಾರ್ಥಿನಿ ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ,  ಎಂ.ಎಸ್‌. ಆರ್ಥೊ ಮೂರನೇ ವರ್ಷದ ವಿದ್ಯಾರ್ಥಿ ದೆಹಲಿಯ ಕ್ಷಿತಿಜ್‌ ಗುಪ್ತ, ಪ್ಯಾಥೋಲಜಿ ಎಂ.ಡಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್‌, ನಾಲ್ಕನೇ ವರ್ಷ ಬಿಡಿಎಸ್‌ ವಿದ್ಯಾರ್ಥಿನಿ ಡಾ.ರಿಯಾ ಚಡ್ಡಾ ಹಾಗೂ ಡಾ.ಮಣಿಮಾರನ್‌ ಮುತ್ತು ಅವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. 

ADVERTISEMENT

ಮಾದಕ ಪದಾರ್ಥ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಪೊಲೀಸರು ಅನಿವಾಸಿ ಭಾರತೀಯ ನೀಲ್‌ ಕಿಶೋರಿಲಾಲ್‌ ರಾಮ್‌ಜಿ ಷಾ (38) ಎಂಬಾತನನ್ನು ಜ. 7ರಂದು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಆಧಾರದಲ್ಲಿ ಇತರ 14 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ ಕೆಎಂಸಿಯ ಏಳು ವಿದ್ಯಾರ್ಥಿಗಳು ಹಾಗೂ ಇಬ್ಬರು ವೈದ್ಯರು ಸೇರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.