ADVERTISEMENT

ಅಜಲು ಪದ್ಧತಿ ಇನ್ನೂ ಜೀವಂತ: ಗಣೇಶ್‌ ಬಾರ್ಕೂರು

ಫೋನ್‌ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:45 IST
Last Updated 19 ಡಿಸೆಂಬರ್ 2019, 19:45 IST

ಉಡುಪಿ: ಕರಾವಳಿಯ ಬುಡಕಟ್ಟು ಸಮುದಾಯವಾದ ಕೊರಗರಲ್ಲಿ ಇಂದಿಗೂ ಅಜಲು ಪದ್ಧತಿ ಜೀವಂತವಾಗಿದ್ದು ಸಮುದಾಯದ ಯುವಕರು ಹಾದಿ ತಪ್ಪುತ್ತಿದ್ದಾರೆ ಎಂದು ಮುಖಂಡ ಗಣೇಶ್‌ ಬಾರ್ಕೂರು ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್‌ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಿದರು.

‘ಕೊರಗರನ್ನು ನಿಕೃಷ್ಟವಾಗಿ ಕಾಣುವ ಅಜಲು ಪದ್ಧತಿಯನ್ನು ಸರ್ಕಾರ 2000ದಲ್ಲಿ ನಿಷೇಧಿಸಿದೆ. ಆದರೂ, ಅಲ್ಲಲ್ಲಿ ಪದ್ಧತಿ ಆಚರಣೆಯಲ್ಲಿದೆ. ಇದರಿಂದಶಾಲೆಗೆ ಹೋಗಬೇಕಾದ ಕೊರಗರ ಮಕ್ಕಳು ಹಾದಿತಪ್ಪಿ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ’ ಎಂದು ದೂರಿದರು.

ಅಜಲು ಪದ್ಧತಿ ನಿಷೇಧ ಕಾಯ್ದೆಯಡಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಬೇಕು ಎಂಬ ನಿಯಮವಿದೆ. ಆದರೆ, ನಿಯಮಿತವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ADVERTISEMENT

ಅಜಲು ಪದ್ಧತಿ ಆಚರಣೆಯಲ್ಲಿರುವುದು ತಲೆ ತಗ್ಗಿಸಬೇಕಾದ ವಿಚಾರ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ತಹಶೀಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದು ಡಿಸಿ ತಿಳಿಸಿದರು. ಅಜಲು ಪದ್ಧತಿ ಆಚರಣೆ ಕಂಡುಬಂದರೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಏನಿದು ಅಜಲು ಪದ್ಧತಿ

ಹಲವು ಕಟ್ಟಲೆಗಳನ್ನು ವಿಧಿಸುವ ಮೂಲಕ ಕೊರಗ ಸಮುದಾಯದವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವ ಪದ್ಧತಿಯನ್ನು ಅಜಲು ಎನ್ನಲಾಗುತ್ತದೆ. ಕೊರಗರು ಇರುವುದೇ ಇತರ ಜಾತಿಗಳ ಚಾಕರಿ ಮಾಡಲು ಎಂಬ ಈ ಪದ್ಧತಿಹಿಂದೆ, ಕರಾವಳಿಯಲ್ಲಿ ವ್ಯಾಪಕವಾಗಿತ್ತು. ರಾತ್ರಿಯಿಡೀ ಕಂಬಳದ ಗದ್ದೆ ಕಾಯುವುದು. ದೇವಸ್ಥಾನದ ಹೊರಗೆ ನಿಂತು ಡೋಲು ಬಾರಿಸುವುದು, ಸ್ವಾಭಿಮಾನಕ್ಕೆ ಪೆಟ್ಟಾಗುವ ಆಚರಣೆಗಳು ಅಜಲು ಪದ್ಧತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.